ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದುಹಿಂದೂಗಳು ಆಚರಿಸುವ ಹಬ್ಬ ಗಣೇಶ ಚತುರ್ಥಿ. ವಿನಾಯಕ ಚತುರ್ಥಿ ಎಂದು ಕರೆಯಲ್ಪಡುವ ಈ ಹಬ್ಬವು ಹಿಂದೂಗಳ ಮುಖ್ಯ ಹಬ್ಬಗಳಲ್ಲಿ ಒಂದಾಗಿದೆ.
ಮೂಶಿಕ ವಾಹನನಾದ ಗಣಪನನ್ನು ವಿಘ್ನನಿವಾರಕನಾಗಿ ಪ್ರತಿಯೊಂದು ಶುಭ ಕಾರ್ಯದ ಮೊದಲು ಪ್ರಾರ್ಥನೆ ಮಾಡುವುದು ಹಿಂದಿನಿಂದಲೂ ಬಂದ ರೂಢಿ. ನಡೆಯುವ ಎಲ್ಲಾ ಕಾರ್ಯಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಕಾರ್ಯವು ನಡೆಯಲಿ ಎನ್ನುವುದಕ್ಕೋಸ್ಕರ ಗಣಪನನ್ನು ಮೊದಲಿಗೆ ನೆನೆಯುತ್ತಾರೆ.
ಗಣೇಶ ಹಬ್ಬದ ಇತಿಹಾಸ
ಗಣೇಶ ಚತುರ್ಥಿಯ ಇತಿಹಾಸ ನೋಡುವುದಾರೆ, ಮಾತೆ ಪಾರ್ವತಿ ದೇವಿಯು ಮಣ್ಣಿನಿಂದ ಒಂದು ಪುಟ್ಟ ಹುಡುಗನ ಮೂರ್ತಿ ತಯಾರಿಸಿ ಅದಕ್ಕೆ ಜೀವ ಕೊಟ್ಟು ಮಾತೆ ಪಾರ್ವತಿಯು ಸ್ನಾನ ಮುಗಿಸಿ ಬರುವ ವರೆಗೂ ಬಾಗಿಲ ಬಳಿ ಕಾಯಲು ಹೇಳಿ, ಯಾರೂ ಬಂದರೂ ಒಳಗೆ ಬಿಡಬಾರದೆಂದು ಅಪ್ಪಣೆ ಮಾಡಿ ಸ್ನಾನಕ್ಕೆ ಹೊರಡುತ್ತಾಳೆ ಹೊರಡುವ ಮುಂಚೆ ಪುಟ್ಟ ಬಾಲಕನ ಕೈಗೆ ಒಂದು ಕೋಲು ಹಾಗೂ ಲಡ್ಡು ಕೊಟ್ಟು ತಿನ್ನುವಂತೆ ಹೇಳಿ ಹೋಗುತ್ತಾಳೆ.
ಇತ್ತ ಪರಮೇಶ್ವರನು ಪಾರ್ವತಿಯನ್ನು ಹುಡುಕುತ್ತಾ ಸ್ನಾನ ಗೃಹದ ಬಳಿ ಬಂದಾಗ ಪುಟ್ಟ ಬಾಲಕನು ಪರಮೇಶ್ವರನನ್ನು ಒಳ ಹೋಗದಂತೆ ತಡೆಯುತ್ತಾನೆ. ಕಾರಣ ಆ ಪುಟ್ಟ ಬಾಲಕನಿಗೆ ಪರಮೇಶ್ವರನ ಬಗ್ಗೆ ತಿಳಿದಿರಲಿಲ್ಲ. ಪರಮೇಶ್ವರ ಎಷ್ಟು ಪ್ರಯತ್ನ ಪಟ್ಟರೂ ಆ ಪುಟ್ಟ ಬಾಲಕ ಪರಮೇಶ್ವರನನ್ನು ಒಳ ಹೋಗಲು ಬಿಡುವುದಿಲ್ಲ. ಇಬ್ಬರ ನಡುವೆ ಯುದ್ಧ ಪ್ರಾರಂಭವಾಗಿ ಪರಶಿವನು ಕೋಪದಿಂದ ತನ್ನ ತ್ರಿಶೂಲದಿಂದ ಆ ಪುಟ್ಟ ಬಾಲಕನ ತಲೆ ಕತ್ತರಿಸಿ ಬಿಡುತ್ತಾನೆ.
ಬಾಲಕನ ಚೀತ್ಕಾರ ಕೇಳಿ ಮಾತೆ ಪಾರ್ವತಿಯು ಓಡಿ ಬಂದು ಪುಟ್ಟ ಬಾಲಕನನ್ನು ನೋಡಿ ಕೋಪಗೊಂಡಳು, ಅಷ್ಟರಲ್ಲಿ ಶಾಂತನಾದ ಪರಶಿವನು ಬಾಲಕನನ್ನು ಬದುಕಿಸುವುದಾಗಿ ಭರವಸೆ ನೀಡಿ, ದೇವತೆಗಳನ್ನು ಉತ್ತರಕ್ಕೆ ತಲೆ ಹಾಕಿ ಮಲಗಿದ ವ್ಯಕ್ತಿಯ ತಲೆಯನ್ನು ತನ್ನಿ ಎಂದು ಕಳಿಸಿದನು. ದೇವತೆಗಳಿಗೆ ಯಾವುದೇ ವ್ಯಕ್ತಿಯ ತಲೆ ಸಿಗದೆ ಉತ್ತರಕ್ಕೆ ಮಲಗಿದ್ದ ಆನೆಯ ತಲೆಯನ್ನು ತಂದು ಆ ಬಾಲಕನಿಗಿಟ್ಟರು. ಬಾಲಕನು ಮತ್ತೆ ಜೀವಿತನಾದನು. ಹಾಗೂ ಮಾತೆ ಪಾರ್ವತಿಯ ಕೋರಿಕೆಯ ಮೇರೆಗೆ ಪ್ರತಿಯೊಬ್ಬ ಜೀವಿಯು ಇನ್ನು ಮುಂದೆ ಯಾವುದೇ ಶುಭ ಕಾರ್ಯ ಮಾಡವ ಮೊದಲು ವಿಘ್ನ ಹರತನ್ನು ನೆನೆಯ ಬೇಕು ಎಂಬುದಾಗಿ ನಿರ್ಧಾರವಾಯಿತು.
ಗಣೇಶ ಚತುರ್ಥಿಯಂದು ವಿಶೇಷವಾಗಿ ಮೋದಕವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಗಣೇಶನ ಪ್ರಿಯವಾದ ಮೋದಕವನ್ನು ಅಕ್ಕಿ ಅಥವಾ ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಈ ಹಿಟ್ಟಿನ ಮಧ್ಯದಲ್ಲಿ ತುರಿದ ತೆಂಗಿನಕಾಯಿ ಹಾಗೂ ಬೆಲ್ಲವನ್ನು ಇಟ್ಟು ಹಬೆಯಲ್ಲಿ ಬೇಯಿಸಿದರೆ ಗಣೇಶನ ಪ್ರಿಯವಾದ ಮೋದಕವು ತಯಾರಾಗುತ್ತದೆ.