ಮೈಸೂರು ನಗರದ ಎತ್ತರವಾದ ಸ್ಥಳದಲ್ಲಿ ಕಂಚಿನ ಕಳಸ ವಿರುವ 2 ಅಂತಸ್ತಿನ ಕಟ್ಟಡ ಒಂದಿದೆ. ಈ ಕಟ್ಟಡ ಈಗ ಜಿಲ್ಲಾಧಿಕಾರಿ ಕಚೇರಿ ಅಥವಾ ಡಿಸಿ ಕಚೇರಿ ಎಂದು ಕರೆಯಲಾಗುತ್ತಿದೆ. ನೂರಾರು ವರ್ಷಗಳ ಹಿಂದೆ ಅಠಾರಾ ಕಚೇರಿ ಎಂದು ಕರೆಯಲಾಗುತ್ತಿತ್ತು. ಹಠಾರಾ ಎಂದರೆ ಹದಿನೆಂಟು ಕಚೇರಿಗಳು, ಈ ಕಟ್ಟಡದಲ್ಲಿ ಹದಿನೆಂಟು ಕಚೇರಿಗಳಿವೆ.
ಜಿಲ್ಲೆಯ ಆಡಳಿತದ ಮುಖ್ಯಸ್ಥರು ಎಂದರೆ ಸರ್ಕಾರದ ನೇರ ಪ್ರತಿನಿಧಿ ಜಿಲ್ಲಾಧಿಕಾರಿಯವರೇ ಆಗಿರುತ್ತಾರೆ. ಪ್ರಸ್ತುತ ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್. ಈ ಪಾರಂಪರಿಕ ಕಟ್ಟಡದ ಮುಂಭಾಗ ಪೂರ್ವಾಭಿ ಮುಖವಾಗಿ ಒಬ್ಬ ವ್ಯಕ್ತಿಯ ಕಂಚಿನ ಪ್ರತಿಮೆ ಇದೆ. ಈ ಮಹಾನ್ ವ್ಯಕ್ತಿಯೇ ಜೇಮ್ಸ್ ಗೋರ್ಡನ್. “ ಜೇಮ್ಸ್ ಗೋರ್ಡನ್ ಪ್ರತಿಮೆಯಲ್ಲಿ ಅವರು ಸುಂದರ ಪೋಷಾಕು ಧರಿಸಿದ್ದಾರೆ. ಬಲಗೈಯಲ್ಲಿ ಟೋಪಿ ಹಿಡಿದು ಕೈಬೀಸಿಕೊಂಡು, ಎಡಗೈಯನ್ನು ಸೊಂಟದಲ್ಲಿರುವ ಕತ್ತಿಯ ಮೇಲೆ ಆಡಿಸುತ್ತಾ ಬಲಗಾಲನ್ನು ಮುಂದೆ ಚಾಚಿ ಎಲ್ಲಿಗೋ ಹೊರಟಂತಿದೆ”.
ಈ ಮಹನೀಯರು ಹತ್ತನೇ ಚಾಮರಾಜೇಂದ್ರ ಒಡೆಯರ್ ಅಧಿಕಾರಕ್ಕೆ ಬರುವ 3ವರ್ಷದ ಮುಂಚೆ ಮೈಸೂರಿನಲ್ಲಿದ್ದರು. ಮಹಾರಾಜರಿಗೆ ಅಧಿಕಾರ ಸಿಕ್ಕ ಮೊದಲ ವರ್ಷ ಮೊದಲ ರೆಸಿಡೆಂಟ್ (೧೮೮೧) ಆಗಿದ್ದವರು. ಅನಾರೋಗ್ಯದ ನಿಮಿತ್ತ ೧೮೮೩ರಲ್ಲಿ ನಿವೃತ್ತಿಯಾದರು. ಇವರ ಮೈಸೂರ ಸಂಸ್ಥಾನದ ಸೇವೆಗೆ ಕೃತಜ್ಞತಾ ಪೂರಕವಾಗಿ ಪ್ರತಿಮೆ ಸ್ಥಾಪನೆ ಆಯಿತು. ಇವರು ಮಹಾರಾಜರು ಬಾಲ್ಯದಲ್ಲಿ (ಮೈನರ್ ಆಗಿದ್ದಾಗ) ಶಿಕ್ಷಣ ಕೊಡಿಸುವ ದೃಷ್ಟಿಯಿಂದ ಈಸ್ಟ್ ಇಂಡಿಯಾ ಕಂಪೆನಿ ರಾಜರ ಟ್ಯೂಟರ್ ಆಗಿ ನೇಮಿಸಲಾಯಿತು. ಗೋರ್ಡಾನ್ ಮಹಾರಾಜರಿಗೆ ಗುರುಗಳು ಮತ್ತು ಸ್ನೇಹಿತರು ಆಗಿದ್ದರು.
ಇವರು ಆಡಳಿತದಲ್ಲಿ ಕನ್ನಡ ಭಾಷೆಯನ್ನು ಜಾರಿಗೊಳಿಸಿದ್ದರಿಂದ ಅವರು ರೈತರಿಗೆ ಅಪಾರ ಸಹಾಯ ಮಾಡಿದ್ದರಿಂದಲೂ ಅಂದಿನ ಶಾಸಕರು (ಎಂ ಆರ್ ಎ)ತೀರ್ಮಾನ ಮಾಡಿ ಈ ಪ್ರತಿಮೆಯನ್ನು ಸ್ಥಾಪಿಸಿದ್ದರು. ಆ ಸಮಯದಲ್ಲಿ ಮೈಸೂರು ಸಂಸ್ಥಾನದ ರೀಜೆಂಟ್ ಅಥವಾ ರಾಜಪ್ರತಿನಿಧಿ ಆಗಿ ಚಾಮರಾಜೇಂದ್ರರ ಪತ್ನಿ ವಾಣಿ ವಿಲಾಸ ಅವರು ಪ್ರತಿಮೆ ಯ ಉದ್ಘಾಟನಾ ಸಮಾರಂಭದಲ್ಲಿ ಇದ್ದರು. ಇವರು ಬ್ರಿಟಿಷ್ ಅಧಿಕಾರಿ ಆಗಿರಬಹುದು ನಾಡಿಗೆ ಒಳ್ಳೆಯ ಕೆಲಸ ಮಾಡಿದ್ದರಿಂದ ಯಾವ ದೇಶವಾದರೇನು ?, ಯಾವ ಭಾಷೆಯವರಾದರೇನು ?, ಅವರನ್ನು ಗೌರವಿಸಬೇಕಾದುದು ಮಾನವೀಯತೆ ಅಲ್ಲವೇ ?.
ಎಲ್ಲಾ ಬ್ರಿಟಿಷ್ ಅಧಿಕಾರಿಗಳು ಕೆಟ್ಟವರಲ್ಲ ಕನ್ನಡನಾಡಿಗೆ ಈಸ್ಟ್ ಇಂಡಿಯಾ ಕಂಪನಿ ಬಂದಾಗಿನಿಂದ ೧೯೪೭ರವರೆಗೆ ಅನೇಕ ಇಲಾಖೆಗಳಲ್ಲಿ ಸಾವಿರಾರು ಜನರು (ವಿದೇಶಿಯರು) ದುಡಿದು – ಮಡಿದು ಹೋಗಿದ್ದರೆ ಅಂತಹ ಮಹನೀಯರನ್ನು ಭಾರತ ದೇಶ ಮತ್ತು ಕನ್ನಡನಾಡು ಗೌರವಿಸಿದೆ .
– ಮಣಿಕಂಠ ತ್ರಿಶಂಕರ್, ಮೈಸೂರು