ನಮಗೆ ವಿದ್ಯೆ ಕಲಿಸಿದ, ಆ ಮೂಲಕ ಬದುಕಲು ದಾರಿ ತೋರಿಸಿದ ಶಿಕ್ಷಕರನ್ನು ನಾವೆಲ್ಲರೂ ನೆನೆಯಲೇ ಬೇಕಾಗಿದೆ. ಶಿಕ್ಷಕರೆಂದರೆ ಎಲ್ಲರಂತಲ್ಲ. ಅವರಿಗೆ ಪೂಜನೀಯ ಸ್ಥಾನವಿದೆ. ಅವರು ತಾವೇನು ಕಲಿತಿದ್ದೇವೆಯೋ ಅದೆಲ್ಲವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದು ವಿದ್ಯಾರ್ಥಿಗಳು ಬೆಳೆಯುವುದನ್ನು ಖುಷಿ ಪಡುವ ಜೀವಗಳು.
ಒಬ್ಬ ವ್ಯಕ್ತಿ ಬೆಳೆದು ಉನ್ನತ ಸ್ಥಾನಕ್ಕೆ ಏರಿದ್ದರೆ ಆತನ ಬಗ್ಗೆ ಯಾವುದೇ ಅಸೂಯೆ ಪಡದೆ ಮನಪೂರ್ವಕವಾಗಿ ಖುಷಿಪಡುವ ಜೀವವಿದ್ದರೆ ಅದು ಆತನಿಗೆ ಪಾಠ ಮಾಡಿದ ಗುರುಗಳಾಗಿರುತ್ತಾರೆ. ಅದನ್ನು ಎಲ್ಲರಿಗೂ ಹೇಳಿಕೊಂಡು ಹೆಮ್ಮೆಪಡುವವರೂ ಗುರುಗಳೇ ಆಗಿರುತ್ತಾರೆ. ಭಾರತದ ರಾಷ್ಟ್ರಪತಿಯಾಗಿದ್ದ ಡಾ.ರಾಧಾಕೃಷ್ಣನ್ ಅವರು ಒಬ್ಬ ಶಿಕ್ಷಕರಾಗಿದ್ದರು ಮತ್ತು ಆ ಶಿಕ್ಷಕ ವೃತ್ತಿಯನ್ನು ಗೌರವಿಸುತ್ತಾ ಅದಕ್ಕೊಂದು ಘನತೆ ತಂದುಕೊಟ್ಟಿದ್ದರು. ಇವತ್ತು ನಾವು ರಾಧಾಕೃಷ್ಣನ್ ಅವರ ಹುಟ್ಟುಹಬ್ಬದ (ಸೆ.5) ದಿನವನ್ನೇ ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ. ಅದು ಖುಷಿಯ ಸಂಗತಿಯೂ ಹೌದು.
ಇವತ್ತು ನಮಗೆ ಅಕ್ಷರ ಕಲಿಸಿದ ಗುರುಗಳಿಗೆ ನಮನ ಹೇಳುವ ದಿನವೂ ಹೌದು. ನಮ್ಮಂತಹ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟ ಶಿಕ್ಷಕರಿಗೆ ನಮ್ಮ ಪರಿಚಯ ಇಲ್ಲದೆ ಇರಬಹುದು. ನಾವೇ ನಿಮ್ಮ ವಿದ್ಯಾರ್ಥಿಗಳು ಅಂದ ತಕ್ಷಣವೇ ಅವರ ಮುಖದಲ್ಲಿ ಸಂತಸ ಉಕ್ಕಿ ಬರುತ್ತದೆ. ಅಂತಹ ಸಂತಸ ಖುಷಿಯನ್ನು ಬೇರೆಯಾರಿಂದಲೂ ನಿರೀಕ್ಷಿಸುವುದು ಕಷ್ಟವೇ.
ಹಿಂದಿನ ಕಾಲದಲ್ಲಿ ಈಗಿನಂತೆ ಶಾಲಾ ಕಾಲೇಜುಗಳಿರಲಿಲ್ಲ ವಿದ್ಯೆಗಳನ್ನು ಶಿಷ್ಯರು ಗುರುಕುಲದಲ್ಲಿ ಕಲಿಯಬೇಕಾಗಿತ್ತು. ಶಿಷ್ಯರು ಗುರುಗಳ ಸೇವೆ ಮಾಡುತ್ತಾ ವಿದ್ಯೆಯನ್ನು ಕಲಿಯುತ್ತಿದ್ದರು. ಇವತ್ತು ಹಾಗಿಲ್ಲ. ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ವಿದ್ಯೆಯನ್ನು ಧಾರೆ ಎರೆಯುತ್ತಾರೆ. ನಾವು ಎಷ್ಟೇ ಓದಿರಲಿ, ಕಾಲೇಜುಗಳನ್ನು ಬದಲಿಸಿರಲಿ. ನಮಗೆ ತಕ್ಷಣ ನೆನಪಿಗೆ ಬರುವುದು ನಿನ್ನೆ ಮೊನ್ನೆ ಕಲಿತ ಕಾಲೇಜಿನ ಉಪನ್ಯಾಸಕರಲ್ಲ. ಬದಲಿಗೆ ಅ, ಆ, ಇ, ಈ ಅಥವಾ ಎ, ಬಿ, ಸಿ, ಡಿ ಕಲಿಸಿದ ಪ್ರಾಥಮಿಕ ಶಾಲಾ ಶಿಕ್ಷಕರು. ಚಿಕ್ಕಂದಿನಿಂದಲೇ ಅವರು ನಮಗೆ ಮಾದರಿಯಾಗಿರುತ್ತಾರೆ. ಅವರು ಹೇಳಿಕೊಟ್ಟ ನೀತಿಪಾಠಗಳು ನಮ್ಮ ಬದುಕಿನಲ್ಲಿ ಆಳವಾಗಿ ಬೇರೂರಿಬಿಟ್ಟಿರುತ್ತವೆ.
ಶಿಕ್ಷಕರು ಅಂದರೆ ಗುರುಗಳು ಒಬ್ಬ ಶಿಷ್ಯನಿಗೆ ಗುರು ಏಕೆ ಬೇಕು ಎಂಬುದನ್ನು ಅಧ್ಯಾತ್ಮಿಕವಾಗಿ ನೋಡಿದರೆ ಅಧ್ಯಾತ್ಮದ ಪ್ರಕಾರ ನಮ್ಮೆಲ್ಲ ಕಾರ್ಯ ಸಾಧನೆಗಾಗಿ ನಮಗೊಬ್ಬ ಗುರು ಬೇಕೇ ಬೇಕು. ಇಂದು ನಾವು ಅಭ್ಯಸಿಸುತ್ತಿರುವ ಯಾವುದೇ ವಿಷಯವಾಗಿರಲಿ ಆ ವಿಷಯಗಳ ಬಗ್ಗೆ ಪರಿಪೂರ್ಣವಾಗಿ ಅರಿತುಕೊಳ್ಳಬೇಕಾದರೆ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇದ್ದೇ ಇದೆಯಂತೆ.
ಪುರಾಣ ಕಾಲದಿಂದಲೂ ಗುರುವಿಗೆ ತಮ್ಮದೇ ಆದ ಪೂಜ್ಯ ಭಾವವಿದೆ. ಗುರು ತಾನು ಪಡೆದದನ್ನು ತನ್ನ ಶಿಷ್ಯರಿಗೆ ಧಾರೆ ಎರೆದಾಗ ಮಾತ್ರ ಆತನ ಬದುಕು ಸಾರ್ಥಕವಾಗುತ್ತದೆ. ಇವತ್ತು ನಾವು ಏನಾಗಿದ್ದೇವೆಯೋ ಅದಕ್ಕೆ ನಮ್ಮ ಗುರುಗಳ ನಿಸ್ವಾರ್ಥ ಸೇವೆಯೂ ಕಾರಣವಾಗಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
ಬಹುಶಃ ಈ ಜಗತ್ತಿನಲ್ಲಿ ನಮ್ಮ ಅಭಿವೃದ್ಧಿ, ಏಳಿಗೆಯನ್ನು ಕಂಡು ಅಥವಾ ಕೇಳಿ ಸಂತೋಷ ಪಡುವ ಜೀವವಿದ್ದರೆ ಅದು ನಮ್ಮ ಶಿಕ್ಷಕರು ಎಂಬುದನ್ನು ಹೆಮ್ಮೆಯಿಂದ ನಾವು ಹೇಳಬಹುದಾಗಿದೆ. ಲಕ್ಷಾಂತರ ಶಿಷ್ಯರಿಗೆ ವಿದ್ಯೆ ಧಾರೆ ಎರೆದ ಶಿಕ್ಷಕರಿಗೆ ವಿದ್ಯಾರ್ಥಿಗಳ ನೆನಪು ಮಸುಕಾಗಿ ಹೋಗಿರುತ್ತದೆ. ಮತ್ತು ಅವರು ನಮ್ಮಿಂದ ದೂರವೂ ಇರಬಹುದು ಆದರೆ ಅಂತಹ ಶಿಕ್ಷಕರಿಗೆ ನಾವು ಹೃದಯಪೂರ್ವಕವಾಗಿ ನಮನ ಸಲ್ಲಿಸಿ ಬಿಡೋಣ.
.