ನಾವೆಲ್ಲರೂ ಏನಾದರೊಂದು ಕೆಲಸ ಮಾಡಲೇ ಬೇಕು. ಕೆಲವರಿಗೆ ಕೆಲಸ ಹೆಸರು, ಹಣ, ಅಂತಸ್ತು ಎಲ್ಲವನ್ನೂ ತಂದುಕೊಡುತ್ತದೆ. ಮತ್ತೆ ಕೆಲವರಿಗೆ ಹೊಟ್ಟೆಪಾಡು ಮಾತ್ರ ಕಳೆಯುತ್ತದೆ. ಎಲ್ಲರೂ ಕೆಲಸ ಮಾಡುತ್ತಾರೆ ಆದರೆ ಇಷ್ಟಪಟ್ಟು ಮಾಡುವವರ ಸಂಖ್ಯೆ ಕಡಿಮೆಯೇ.
ಹಲವರು ಹಲವು ಕಾರಣಗಳಿಂದ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿರುತ್ತೇವೆ. ಇದು ನನಗೆ ಸರಿ ಹೊಂದುವ ಕೆಲಸವಲ್ಲ, ನನ್ನ ಯೋಗ್ಯ ತೆಗೆತಕ್ಕ ಕೆಲಸವೂ ಅಲ್ಲ ಎಂಬ ಸತ್ಯ ಗೊತ್ತಿದ್ದರೂ ಅನಿವಾರ್ಯ ಕಾರಣಗಳಿಂದ ಮಾಡಬೇಕಾಗುತ್ತದೆ. ಈ ವೇಳೆ ನಾವು ಓದಿರುವುದಕ್ಕೆ ತಕ್ಕಂತೆ ಕೆಲಸ ಸಿಕ್ಕಿಲ್ಲ. ಇದು ನಾನು ಮಾಡೋ ಕೆಲಸವಲ್ಲ. ಆದರೂ ಮಾಡಬೇಕಲ್ಲ ಎಂಬ ಕೊರಗು ಕಾಡುವುದು ಸಹಜ. ಇಂತಹದೊಂದು ಮನೋಭಾವ ನಮ್ಮಲ್ಲಿ ಮೂಡಿದ್ದೇ ಆದರೆ ಖಂಡಿತವಾಗಿ ನಮ್ಮ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯವಾಗದು.
ಜಗತ್ತು ವಿಶಾಲವಾಗಿ ಬೆಳೆದಿದೆ. ಕಷ್ಟಪಟ್ಟು ದುಡಿಯುತ್ತೇನೆ, ಯಾವ ಕೆಲಸವಾಗಲಿ ಮಾಡುತ್ತೇನೆ ಎಂದು ಹೊರಡುವವರಿಗೆ ಉದ್ಯೋಗಕ್ಕೆ ಬರವಿಲ್ಲ. ಆದರೆ ನಾನು ಆ ಕೆಲಸ ಮಾಡಬೇಕಾ ಎಂದು ರಾಗ ಎಳೆಯುವವರು ಮಾತ್ರ ನಿರುದ್ಯೋಗಿಯಾಗಿಯೇ ಉಳಿದು ಬಿಡುತ್ತಾರೆ ಅಷ್ಟೇ ಅಲ್ಲದೆ ಕೆಲಸಕ್ಕಾಗಿ ಅಲೆಯುತ್ತಾ ದುಡಿಯುವ ವಯಸ್ಸನ್ನು ಕಳೆದುಕೊಳ್ಳುತ್ತಾರೆ.
ಉದ್ಯೋಗಂ ಪುರುಷ ಲಕ್ಷಣಂ ಎನ್ನುವ ಕಾಲವಿತ್ತು. ಈಗ ಅದು ಸರ್ವರ ಲಕ್ಷಣಂ ಆಗಿದೆ. ಏಕೆಂದರೆ ಒಬ್ಬರ ದುಡಿಮೆಯಲ್ಲಿ ಜೀವನ ಸಾಗಿಸುವ ಕಾಲ ಸರಿಯುತ್ತಿದೆ. ಬೆಲೆ ಗಗನಕ್ಕೇರುತ್ತಿರುವ ಕಾಲ ಘಟ್ಟದಲ್ಲಿ ಗಂಡ ಹೆಂಡತಿ ಇಬ್ಬರು ದುಡಿದರೂ ಸಂಸಾರ ನಿಭಾಯಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಏನಾದರೊಂದು ಕೆಲಸ ಮಾಡಬೇಕು. ಅದರಲ್ಲೊಂದಿಷ್ಟು ಆದಾಯ ಬರಬೇಕು ಎಂಬುದು ಪ್ರತಿಯೊಬ್ಬರ ನಿರೀಕ್ಷೆಯಾಗಿದೆ.
ನಾವೆಲ್ಲರೂ ದುಡಿದು ಬದುಕಬೇಕು. ಆ ದುಡಿಮೆಯಲ್ಲಿ ಜೀವನ ಸಾಗಿಸಬೇಕು. ಇದು ಹಿಂದಿನಿಂದಲೂ ನಡೆದು ಬಂದ ರೂಢಿ. ದುಡಿಮೆ ಎಂದರೆ ಹಣ ಸಂಪಾದಿಸುವುದು ಎಂದರ್ಥ. ಆದರೆ ಇತ್ತೀಚಿಗಿನ ದಿನಗಳಲ್ಲಿದುಡಿದೇ ಹಣ ಸಂಪಾದಿಸಬೇಕು ಎಂಬ ಮನೋಸ್ಥಿತಿ ಬದಲಾಗಿದೆ. ಪರಿಣಾಮ ಸುಲಭ ಮಾರ್ಗದಲ್ಲಿ, ವಾಮಮಾರ್ಗದಲ್ಲಿ ಸಂಪಾದಿಸುವತ್ತ ಕಾರ್ಯ ಮಗ್ನರಾಗುತ್ತಿದ್ದು, ತಾವು ಹಿಡಿಯುತ್ತಿರುವ ದಾರಿ ನೈತಿಕವಲ್ಲ ಎಂಬ ಅರಿವಿದ್ದರೂ ಮೋಸ ವಂಚನೆಯ ಮೂಲಕ ಹಣ ಸಂಪಾದಿಸಿ ಶೀಘ್ರ ಶ್ರೀಮಂತರಾಗುವಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ತಂತ್ರ, ಕುತಂತ್ರ ಮಾಡುತ್ತಾ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಯಾರು ಹಾಳಾದರೇನು ನಾವು ಚೆನ್ನಾಗಿರಬೇಕೆಂದು ಬಯಸುವ ಇಂಥವರಿಂದ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯವಾಗುವುದಿಲ್ಲ.
ನಾವು ಕೆಲಸದಲ್ಲಿ ಫಲಾಫೇಕ್ಷೆ ಬಯಸುವುದು ತಪ್ಪಲ್ಲ. ಆದರೆ ಮಾಡುವ ಕೆಲಸಕ್ಕೆಲ್ಲಾ ಫಲವನ್ನು ಅಪೇಕ್ಷಿಸುವುದು ತಪ್ಪು. ಒಂದಷ್ಟು ಉದಾರತೆ ನಮ್ಮಲ್ಲಿರಬೇಕು. ನಾವು ಮಾಡುವ ಕೆಲಸಗಳ ಮೂಲಕ ತಮಗಿಂತ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಕೆಲಸವೂ ಬರೀ ಹಣವೊಂದನ್ನೇ ತಂದು ಕೊಡುವುದಿಲ್ಲ. ಅದು ಅದರದ್ದೇ ಆದ ಘನತೆ, ಗೌರವ, ನೆಮ್ಮದಿಯಶಸ್ಸನ್ನೂ ತಂದುಕೊಡುತ್ತದೆ. ಹೀಗಾಗಿ ಮಾಡುವ ಕೆಲಸದಲ್ಲಿ ಯಶಸ್ಸಿನತ್ತ ನಮ್ಮ ಗುರಿ ಇರಬೇಕು. ಜತೆಗೆ ಏನು ಮಾಡುತ್ತಿದ್ದೇವೆಯೋ ಅದನ್ನು ಕಷ್ಟಪಟ್ಟು ಮಾಡುವ ಬದಲಿಗೆ ಇಷ್ಟಪಟ್ಟು ಮಾಡುವ ಜಾಣತನ ಬೆಳೆಸಿಕೊಳ್ಳಬೇಕು.
ಅಭಿವೃದ್ಧಿ ಹೊಂದಲು ನಮಗೆ ಎಟುಕುವ ಕೆಲಸವನ್ನು ಮಾಡುವುದೊಂದೇ ನಮಗಿರುವ ಮಾರ್ಗ. ಕೆಲಸ ಯಾವುದೇ ರೀತಿಯದ್ದಾಗಲಿ ಅದನ್ನು ನಾವು ಅಸಡ್ಡೆ ಮಾಡದೆ ಮನಪೂರ್ವಕವಾಗಿ ಚೆನ್ನಾಗಿ ಮಾಡುವುದರಿಂದ ಅದು ನಮ್ಮನ್ನು ಕಾಪಾಡುತ್ತದೆ ಎಂಬುದನ್ನು ಮರೆಯಬಾರದು.