ಕಾಸರಗೋಡು: ರಾಷ್ಟ್ರಕವಿ ಮಂಜೇಶ್ವರ ಗೋವಿಂದಪೈ ಅವರ 140ನೇ ಜಯಂತಿ ಸಮಾರಂಭವು ಕವಿ ಸ್ಮಾರಕ ಭವನ ಗಿಳಿವಿಂಡುವಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. ರಾಜ್ಯ ಸರಕಾರದ ಸಾಂಸ್ಕೃತಿಕ ಇಲಾಖೆಯ ಅಧೀನದಲ್ಲಿರುವ ಮಂಜೇಶ್ವರ ಗೋವಿಂದಪೈ ಸ್ಮಾರಕ ಸಮಿತಿಯ ಆಶ್ರಯದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.
ಶಾಸಕ ಎ.ಕೆ.ಎಂ.ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾಡಿನ ಸಾಂಸ್ಕೃತಿಕ ಹಾಗೂ ಸಾಹಿತ್ಯದ ಬೆಳವಣಿಗೆಗೆ ಗೋವಿಂದ ಪೈ ಅವರ ಸ್ಮರಣೆ ಸದಾ ಉತ್ತೇಜನಕಾರಿ ಎಂದರು.
ಸಹಾಯಕ ಜಿಲ್ಲಾಧಿಕಾರಿ ಮಿಥುನ್ ಪ್ರೇಮರಾಜ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಅವರು ಕನ್ನಡದ ಖ್ಯಾತ ಕವಿ ಹಾಗೂ ಲೇಖಕ ಡಾ.ಕೆ.ರಮಾನಂದ ಬನಾರಿ ಅವರಿಗೆ ಗೋವಿಂದಪೈ ಸ್ಮಾರಕ ಪ್ರಶಸ್ತಿ ಪ್ರಧಾನ ಮಾಡಿದರು.
ಗೋವಿಂದ ಪೈ ಅವರನ್ನು ಆದರ್ಶವಾಗಿ ಡಾ.ಬನಾರಿಯವರು ಸಾಹಿತ್ಯ ಹಾಗು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಾಡುತ್ತಿರುವ ಸೇವೆ ಮಹತ್ತರವಾದುದು ಎಂದು ಅಭಿಪ್ರಾಯಪಟ್ಟರು. ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೊ, ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಕಣ್ಣೂರು ವಿವಿ ಭಾಷಾ ವೈವಿಧ್ಯ ಕೇಂದ್ರ ಡಾ.ಎ.ಎಂ.ಶ್ರೀಧರನ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಡಿ.ಕಮಲಾಕ್ಷ, ವನಿತಾ ಆರ್.ಶೆಟ್ಟಿ, ಆಶಾ ದಿಲೀಪ್, ವಾಸುದೇವನ್, ಕಮಲಾಕ್ಷ ಕನಿಲ ಮಾತನಾಡಿದರು.
ಸಂಸ್ಮರಣಾ ಸಮಿತಿಯ ಕಾರ್ಯದರ್ಶಿ ಉಮೇಶ ಎಂ.ಸಾಲಿಯಾನ್ ಸ್ವಾಗತಿಸಿ, ಕೋಶಾಧಿಕಾರಿ ಬಿ.ಬಾಲಕೃಷ್ಣ ಶೆಟ್ಟಿಗಾರ್ ವಂದಿಸಿದರು. ರಾಧಾಕೃಷ್ಣ ಕೆ ಉಳಿಯತಡ್ಕ ಅವರು ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರನ್ ಪಾಡಿ, ರಾಘವನ್ ಬೆಳ್ಳಿಪ್ಪಾಡಿ, ಸುಂದರ ಬಾರಡ್ಕ, ಕುಶಾಲಾಕ್ಷಿ ಕುಲಾಲ್, ಶ್ಯಾಮಲಾ ರವಿರಾಜ್, ಶಶಿಕಲಾ ಕುಂಬಳೆ, ಗಣೇಶ್ ಪ್ರಸಾದ್ ಮಂಜೇಶ್ವರ, ವನಿತಾ ಆರ್ ಶೆಟ್ಟಿ, ಶ್ರೀನಿವಾಸ ನಾಯಕ್ ಸ್ವರ್ಗ, ವನಜಾಕ್ಷಿ ಚೆಂಬ್ರಕಾನ ಮತ್ತು ಸುಜಿತ್ ಬೇಕೂರ್ ಕವನಗಳನ್ನು ಪ್ರಸ್ತುತ ಪಡಿಸಿದರು. ಮಂಗಳೂರು ರುದ್ರ ರಂಗಮಂದಿರದವರಿಂದ ಶೂದ್ರಶಿವ ನಾಟಕ ಮತ್ತು ಜಾನಪದ ನೃತ್ಯ ನಡೆಯಿತು.