ನಾಗಮಂಗಲ: ನಾಗಮಂಗಲ ತಾಲೂಕಿನ ನಾಗನಕೆರೆಯಲ್ಲಿ ನಡೆದ ಗಿಡದ ಜಾತ್ರೆಯಲ್ಲಿ ಶ್ರೀ ವೆಂಕಟೇಶ್ವರನ ಭಕ್ತಾಧಿಗಳು ಭಾಗವಹಿಸಿ ಭಕ್ತಿಭಾವ ಮೆರೆದರಲ್ಲದೆ, ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಜಾತ್ರೆಯಲ್ಲಿ ನೆರೆದಿದ್ದ ಭಕ್ತರು ಗೋವಿಂದನ ಸ್ಮರಣೆ ಮಾಡಿದರು. ಈ ವೇಳೆ ಉದ್ಘೋಷ ಮುಗಿಲು ಮುಟ್ಟಿತು. ಬೆಟ್ಟದ ಗುಡಿ ಮೇಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಬಳಿ ಶ್ರೀ ಕ್ಷೇತ್ರ ತಿರುಮಲ ತಿರುಪತಿ ನಡೆಯುವ ಪೂಜಾ ವಿಧಿ ವಿಧಾನಗಳಂತೆ ಉತ್ಸವ ಮೂರ್ತಿ ಹಾಗೂ ವೆಂಕಟೇಶ್ವರನ ದೇವರಿಗೆ ವಿಶೇಷ ಪೂಜಾಲಂಕಾರ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು.
ಈ ಗಿಡದ ಜಾತ್ರೆಯ ವಿಶೇಷತೆ ಏನೆಂದರೆ ಇಲ್ಲಿ ಒಂದು ಮಾಂಸ ಮಾರಾಟವೂ ಇದ್ದು ಭಕ್ತರು ಮಾಂಸವನ್ನು ಸ್ವಾಮಿಯ ಪ್ರಸಾದವೆಂದು ಸೇವಿಸುವುದು ನಡೆದುಬಂದಿದೆ. ಗಿಡದ ಜಾತ್ರೆ ಮೂಲ ಸ್ಥಳದಲ್ಲಿಯೂ ದಾಸಪ್ಪರು ಸೇರಿ ಕೆರೆಯಲ್ಲಿ ಗಂಗಾ ಪೂಜೆ ಮಾಡಿ ವೆಂಕಟೇಶ್ವರನ ಸ್ಮರಣೆ ಮಾಡಿದರು.
ಎರಡನೇ ತಿರುಪತಿ ಎಂದು ಪ್ರಸಿದ್ಧಿಯಾಗಿರುವ ಈ ಕ್ಷೇತ್ರ ಗಿಡದ ಜಾತ್ರೆಯ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದು ದಾಸಪ್ಪರಿಗೆ ಹರಕೆ ಒಪ್ಪಿಸಿ ಸ್ವಾಮಿಯ ದರ್ಶನ ಪಡೆಯುವುದು ವಿಶೇಷವಾಗಿರುವುದರಿಂದ ಸುತ್ತಮುತ್ತಲಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕಂಡು ಬಂದಿತು.