ಬೆಂಗಳೂರು: ಅರಮನೆ ಶಂಕರ್ ಸೇವಾ ಪ್ರತಿಷ್ಠಾನ (ರಿ)ದಿಂದ ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ನಾಗಮಂಗಲ ಹಾಗೂ ನಾಗಮಂಗಲದಿಂದ ಬೆಂಗಳೂರಿಗೆ ಪ್ರತಿನಿತ್ಯ ಉಚಿತ ಬಸ್ ಸೇವೆ ಮಾಡಲಾಗಿದೆ.
ಯುವ ಉದ್ಯಮಿ, ಅರಮನೆ ಶಂಕರ್ ತಮ್ಮ ಸೇವಾ ಪ್ರತಿಷ್ಠಾನದ ಮೂಲಕ ತಮ್ಮ ಹುಟ್ಟೂರಿನ ಋಣ ತೀರಿಸಲು ನಿರಂತರವಾಗಿ ಉಚಿತ ಬಸ್ ಸೇವೆಯನ್ನು ಒದಗಿಸಿದ್ದಾರೆ ಎನ್ನಲಾಗಿದ್ದು, ಗೌರಿ – ಗಣೇಶ ಚತುರ್ಥಿ ಅಂಗವಾಗಿ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಶ್ರೀನಗರ ಬಸ್ ನಿಲ್ದಾಣದಲ್ಲಿ ಬಸ್ ಸೇವೆಗೆ ಚಾಲನೆ ನೀಡಲಾಗಿದೆ. ಬೆಂಗಳೂರಿನ ಶ್ರೀನಗರ ದಿಂದ ನಾಗಮಂಗಲಕ್ಕೆ ಪ್ರತಿ ದಿನ ಬೆಳಿಗ್ಗೆ 8:30ಕ್ಕೆ ಒಂದು ಬಸ್ ಸಂಚರಿಸಿದರೆ ಮಧ್ಯಾಹ್ನ 3 ಕ್ಕೆ ನಾಗಮಂಲದಿಂದ ಬೆಂಗಳೂರಿಗೆ ಮತ್ತೊಂದು ಬಸ್ ಹೊರಡಲಿದೆ. ಒಂದು ಬಸ್ ಮಂಡ್ಯ ಮತ್ತೊಂದು ಬಸ್ ಬೆಳ್ಳೂರು ಕ್ರಾಸ್ ಮಾರ್ಗವಾಗಿ ಸಾಗಲಿದೆ.
ಬಸ್ ವ್ಯವಸ್ಥೆ ಮಾಡಿರುವ ಅರಮನೆ ಶಂಕರ್ ಅವರು, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಖರಡ್ಯ ಗ್ರಾಮದ ರೈತಾಪಿ ಕುಟುಂಬದ ವೆಂಕಟೇಗೌಡ ಮತ್ತು ಜಯಮ್ಮ ಅವರ ಕಿರಿಯ ಪುತ್ರ. ಬೆಂಗಳೂರಿನಲ್ಲಿ ಹಲವಾರು ಉದ್ಯಮಗಳನ್ನು ನಡೆಸುತ್ತಿದ್ದಾರೆ. ಸಮಾಜ ಸೇವೆ ಇವರ ಪ್ರವೃತ್ತಿ. ಯಾವುದೇ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳದೇ ತಟಸ್ಥವಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಶಿಕ್ಷಣ, ಕ್ರೀಡೆ, ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ.
ಉದ್ಘಾಟನೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅರಮನೆ ಶಂಕರ್, ನಾಗಮಂಗಲದ ಜನರಿಗೆ ಉಚಿತ ಬಸ್ ಸೇವೆ ಒದಗಿಸುವಂತೆ ತಮ್ಮ ತಾಯಿ ಬಯಕೆಯನ್ನು ಈ ಮೂಲಕ ಈಡೇರಿಸುತ್ತಿದ್ದೇನೆ. ಸಮಾಜ ಸೇವೆಯಲ್ಲಿ ತೊಡಗಲು ತಮಗೆ ಆದಿಚುಂಚನಗರಿ ಮಠದ ಶ್ರೀಗಳೇ ಪ್ರೇರಣೆಯಾಗಿದ್ದಾರೆ. ಜನ ಸಾಮಾನ್ಯರು ತಮ್ಮ ಊರಿಗೆ ನಿರಾಯಾಸವಾಗಿ ತೆರಳಲು ಈ ವ್ಯವಸ್ಥೆ ಕಲ್ಪಿಸಲಾಗಿದೆ. ತಮ್ಮ ಊರಿನ ಜನರಿಗೆ ಇನ್ನಷ್ಟು ಸಮಾಜ ಸೇವೆ ಮಾಡುವ ಹೆಬ್ಬಯಕೆ ತಮ್ಮದಾಗಿದೆ ಎಂದು ಹೇಳಿದ್ದಾರೆ.