ಶಿವಮೊಗ್ಗ: ಖಾಸಗಿ ದೂರಿನ ಪ್ರಕರಣಗಳಲ್ಲಿ ಪೋಲಿಸರು ವಾರೆಂಟನ್ನು ಜಾರಿಗೊಳಿಸುತ್ತಿಲ್ಲ. ಬದಲಿಗೆ ಆರೋಪಿ ಸಿಗಲಿಲ್ಲ, ಊರಿನಲ್ಲಿಲ್ಲ, ಪರಸ್ಥಳಕ್ಕೆ ಹೋಗಿದ್ದಾರೆ, ಪಿರ್ಯಾದಿ ಸಹಕರಿಸಲಿಲ್ಲ ಎಂಬಿತ್ಯಾದಿ ಹಲವು ಕಾರಣಗಳನ್ನು ಪುಕ್ಕಟೆಯಾಗಿ ನೀಡುತ್ತಾ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ವಿಳಂಬ ನೀತಿ ಅನುಸರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಅಶೋಕ ಜಿ.ಭಟ್ಟ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ ಅವರು, ಪಿರ್ಯಾದಿಯು ನ್ಯಾಯಾಲಯದಲ್ಲಿ ವಾರೆಂಟ್ ಜಾರಿ ಮಾಡಿಸಲು ಪ್ರೊಸೆಸ್ ಫೀ ಕಟ್ಟಿ ಕಟ್ಟಿ ಸುಸ್ತಾಗುತ್ತಿದ್ದಾನೆ. ಆದರೆ ಪೋಲಿಸರೇ ಸ್ವತ: ಹಾಕಿದ ಕೇಸಿನಲ್ಲಿ ಆರೋಪಿಗಳು ಎಲ್ಲಿದ್ದರೂ ತಲಾಶ್ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿದ್ದು, ಖಾಸಗಿ ದೂರಿನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಅಸಡ್ಡೆ ತೋರಿಸಲಾಗುತ್ತಿದೆ ಎಂದರು.
ಈ ತಾರತಮ್ಯ ನೀತಿಯಿಂದಾಗಿ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ನಡೆಸುವುದೇ ಕಷ್ಟವಾಗುತ್ತಿದೆ ಎಂದ ಅವರು ಈ ಬಗ್ಗೆ ಆಯಾ ಸ್ಥಳೀಯ ವರಿಷ್ಟಾಧಿಕಾರಿಗಳೂ ಕೂಡಾ ಯಾವುದೇ ಗಮನ ನೀಡುತ್ತಿಲ್ಲ. ಹೀಗಾದರೆ ಖಾಸಗಿ ದೂರನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಹೇಗೆ ಎಂಬುದೇ ಸವಾಲಾಗಿ ಪರಿಣಮಿಸಿದೆ ಎಂದು ಅವರು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.
ಖಾಸಗಿ ದೂರಿನಲ್ಲಿ ವಾರೆಂಟ್ ಜಾರಿ ಮಾಡುವ ಸಲುವಾಗಿ ನ್ಯಾಯಾಂಗ ಮತ್ತು ಪೋಲಿಸ್ ಇಲಾಖೆ ಮಧ್ಯೆ ಸೂಕ್ತ ರೀತಿಯ ಚರ್ಚೆ ಆಗುವ ಅನಿವಾರ್ಯತೆ ಇದ್ದು ಈ ನಿಟ್ಟಿನಲ್ಲಿ ಸುಧಾರಿತ ವ್ಯವಸ್ಥೆಯನ್ನು ಕಂಡುಕೊಳ್ಳಬೇಕಾಗಿದೆ. ಈ ಬಗ್ಗೆ ಗಮನ ಹರಿಸದಿದ್ದರೆ ಸಾವಿರಾರು ಪ್ರಕರಣಗಳು ಹಾಗೇ ಉಳಿಯುವುದನ್ನು ತಳ್ಳಿ ಹಾಕುವಂತಿಲ್ಲ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.