ಮಂಗಳೂರು: “ಸ್ವಾಮಿ ವಿವೇಕಾನಂದರ ಅವರ ಜೀವನದಲ್ಲಿ ವಿಶ್ವ ಮಾನವತೆಯ ಪರಿಕಲ್ಪನೆ ಕಾಣಬಹುದು. ಭಾರತೀಯರು ಸ್ವಾಮಿ ವಿವೇಕಾನಂದರನ್ನು ರಾಷ್ಟ್ರಭಕ್ತ ಸಂತ ಎಂದು ಕರೆದರೂ ಅವರು ಕೇವಲ ಭಾರತಕ್ಕೆ ಮಾತ್ರ ಸೀಮಿತವಾದವರಲ್ಲ ಅವರ ಕಾರ್ಯ ಹಾಗೂ ಚಿಂತನೆಗಳು ಜಾಗತಿಕವಾದದ್ದು. ಯುವಕರು, ದೀನರು, ಮಹಿಳೆಯರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗದವರ ಏಳಿಗೆಗೆ ಅವರು ಶ್ರಮಿಸಿದರು. ಭಾರತದ ಮೇಲಿನ ಅವರ ಪ್ರೀತಿ ಜಾಗತಿಕ ಮೌಲ್ಯಗಳ ಆಧಾರಿತವಾದದ್ದು. ಸಮಾಜದ ಕೆಳ ಸ್ತರದ ವ್ಯಕ್ತಿಯಿಂದ ಹಿಡಿದು ಮೇಲಿನ ಸ್ತರದ ಪ್ರಭಾವಿ ಮೇಧಾವಿ ವ್ಯಕ್ತಿಗಳವರೆಗೆ ಎಲ್ಲರನ್ನೂ ಒಳಗೊಳ್ಳುವ ವಿಶಾಲವಾದ ದೃಷ್ಟಿಕೋನ ಸ್ವಾಮಿ ವಿವೇಕಾನಂದರದ್ದು. ಜಗತ್ತಿನ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜತಾಂತ್ರಿಕ, ಸೇರಿದಂತೆ ಪ್ರತಿಯೊಂದು ಸಮಸ್ಯೆಗಳ ಮೇಲೆ ಅವರು ಬೆಳಕು ಚೆಲ್ಲಿದ್ದರು. ಸ್ವಾಮಿ ವಿವೇಕಾನಂದ ಚಿಂತನೆ ವಿಶ್ವನ್ನೇ ತಬ್ಬುವ ವಿಶ್ವಾತ್ಮ ಭಾವ.” ಎಂದು ಯುನೈಟೆಡ್ ಕಿಂಗ್ ಡಮ್ ನ ರಾಮಕೃಷ್ಣ ವೇದಂತ ಸೆಂಟರ್ ನ ಮುಖ್ಯಸ್ಥರಾದ ಸ್ವಾಮಿ ಸರ್ವಸ್ಥಾನಂದಜಿ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕ ವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಹತ್ತನೇ ಉಪನ್ಯಾಸದಲ್ಲಿ “ಸ್ವಾಮಿ ವಿವೇಕಾನಂದ ಹಾಗೂ ಅವರ ವಿಶ್ವ ಮಾನವತೆಯ ಪರಿಕಲ್ಪನೆ” ಎಂಬ ವಿಷಯದ ಕುರಿತು ಮಾತನಾಡಿದರು. ಈ ಕಾರ್ಯಕ್ರಮ ಆನ್ ಲೈನ್ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನ್ಯಾಕ್ ನ ನಿರ್ದೇಶಕ ಡಾ. ಎಸ್. ಸಿ. ಶರ್ಮ, ಗುಜರಾತ್ ರಾಜ್ಯದ ರಾಜಕೋಟ್ ನ ಉದ್ಯಮಿಗಳಾದ ಶ್ರೀ ಧರ್ಮೇಶ್ ಜೋಶಿ, ನಿಟ್ಟೆ ವಿಶ್ವವಿದ್ಯಾಲಯದ ಡಾ. ಸತೀಶ್ ರಾವ್, ಡಾ. ಶಶಿ ಕುಮಾರ್ ಶೆಟ್ಟಿ, ಮಂಗಳೂರಿನ ಎಸ್. ಡಿ ಎಮ್. ಸ್ನಾತಕೋತ್ತರ ವ್ಯವಹಾರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಸೀಮಾ ಶೆಣೈ, ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯ,ನಿಟ್ಟೆ ವಿಶ್ವವಿದ್ಯಾಲಯ, ಆದಿಚುಂಚನಗಿರಿ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಡಾ. ಡಿ. ಜಿ. ಶೆಟ್ಟಿ ವಾಣಿಜ್ಯ ಹಾಗೂ ವ್ಯವಹಾರ ಅಧ್ಯಯನ ಸಂಸ್ಥೆ ಉಡುಪಿ; ಇವುಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಗೂ ಆಸಕ್ತ ಸಾರ್ವಜನಿಕರು ಈ ಆನ್ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕರಾದ ಪ್ರೊ. ಶ್ರೀಪತಿ ಕಲ್ಲೂರಾಯ ಪಿ. ಸ್ವಾಗತಿಸಿ, ವಿವೇಕಾನಂದ ಅಧ್ಯಯನ ಕೇಂದ್ರದ ಸದಸ್ಯರಾದ ಡಾ. ಚಂದ್ರು ಹೆಗ್ಡೆ ವಂದಿಸಿದರು, ಮಂಗಳೂರು ರಾಮಕೃಷ್ಣ ಮಠದ ಸ್ವಯಂಸೇವಕರಾದ ರಂಜನ್ ಬೆಳ್ಳರ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.