ಮಂಗಳೂರು: ಮಂಗಳೂರು ನಗರಕ್ಕೆ ಮೂಡಾ ಮೊದಲ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಿರುವ 15 ಉದ್ಯಾನವನಗಳ ಯೋಜನೆ ರ್ಯಗತಗೊಳಿಸುವಲ್ಲಿ ನಾಗರಿಕರು ಮತ್ತು ಹೊಸದಾಗಿ ರಚಿಸಲಾದ ವಾರ್ಡ್ ಸಮಿತಿಗಳನ್ನು ತೊಡಗಿಸಿಕೊಳ್ಳಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮೂಡಾ) ಮಂಗಳೂರು ಸಿವಿಕ್ ಗ್ರೂಪ್ ಮನವಿಯನ್ನು ಸಲ್ಲಿಸಿದೆ.
ಮಂಗಳೂರು ಸಿವಿಕ್ ಗ್ರೂಪ್ನ ಪ್ರತಾಪಚಂದ್ರ ಕೆದಿಲಾಯ ಮತ್ತು ಸುರೇಶ್ ನಾಯಕ್ ಅವರನ್ನೊಳಗೊಂಡ ನಿಯೋಗವು 2ನೇ ನವೆಂಬರ್ 2021 ರಂದು ಮಂಗಳವಾರ ಮೂಡಾ ಕಚೇರಿಯಲ್ಲಿ ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಮತ್ತು ಮೂಡಾ ಆಯುಕ್ತ ಡಾ. ಭಾಸ್ಕರ್ ಎನ್. ಅವರನ್ನು ಭೇಟಿ ಮಾಡಿ ಮಂಗಳೂರಿನ ವಿವಿಧ ವಾರ್ಡ್ಗಳ 21 ಸದಸ್ಯರು ಸಹಿ ಮಾಡಿದ ಮನವಿ ಪತ್ರವನ್ನು ಹಸ್ತಾಂತರಿಸಿತು. ಮಂಗಳೂರಿನ ಪ್ರತಿ ವಾರ್ಡ್ನಲ್ಲಿ ಉದ್ಯಾನವನಗಳನ್ನು ನಿರ್ಮಿಸುವ ಚಿಂತನೆಯನ್ನು ಮೂಡಾ ಕಲ್ಪಿಸಿದ್ದಕ್ಕಾಗಿ ಅವರು ಅಭಿನಂದನೆ ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿದ ಅಧ್ಯಕ್ಷರು ಮತ್ತು ಆಯುಕ್ತರು ಅದನ್ನು ಧನಾತ್ಮಕವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.
ಮಂಗಳೂರಿನಲ್ಲಿ ಸ್ಥಳೀಯ ವಾರ್ಡ್ ಆಡಳಿತಕ್ಕಾಗಿ ವಾರ್ಡ್ ಸಮಿತಿಗಳು ಮತ್ತು ಪ್ರದೇಶ ಸಭೆಗಳನ್ನು ಪ್ರಾರಂಭಿಸುವ ಅಭಿಯಾನದಲ್ಲಿ ಮಂಗಳೂರು ಸಿವಿಕ್ ಗ್ರೂಪ್ ಮುಂಚೂಣಿಯಲ್ಲಿತ್ತು. ಮಹಾನಗರಪಾಲಿಕೆಯು ಈಗ ಮಂಗಳೂರಿನ ಎಲ್ಲಾ 60 ವಾರ್ಡ್ಗಳಲ್ಲಿ ವಾರ್ಡ್ ಸಮಿತಿಗಳನ್ನು ರಚಿಸಿದೆ. ಉದ್ಯಾನವನಗಳ ನಿರ್ವಹಣೆಯು 2011 ರ ಕೆಎಂಸಿ (ತಿದ್ದುಪಡಿ) ಕಾಯಿದೆಯ ಪ್ರಕಾರ ವಾರ್ಡ್ ಸಮಿತಿಗಳ ಕರ್ತವ್ಯಗಳಲ್ಲಿ ಸೇರಿದೆೆ. ವಾರ್ಡ್ ಸಮಿತಿಗಳು ಮತ್ತು ಪ್ರದೇಶ ಸಭೆಗಳ ಮೂಲಕ ನಾಗರಿಕರನ್ನು ತೊಡಗಿಸಿಕೊಳ್ಳುವುದು ಸಹಭಾಗಿತ್ವದ ಪ್ರಜಾಪ್ರಭುತ್ವಕ್ಕೆ ವರದಾನವಾಗಲಿದೆ. ಮಂಗಳೂರು ಸಿವಿಕ್ ಗ್ರೂಪ್ ಮಂಗಳೂರು ನಗರಕ್ಕೆ ಅತ್ಯುತ್ತಮ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಮೂಡಾದೊಂದಿಗೆ ಸಕ್ರೀಯವಾಗಿ ಶ್ರಮಿಸುವ ಆಶಯ ಹೊಂದಿದೆ.
ಸ್ಥಳೀಯ ಸ್ವ-ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮಂಗಳೂರು ಸಿವಿಕ್ ಗ್ರೂಪ್ ಅನ್ನು 2015 ರಲ್ಲಿ ‘ಎಂಸಿಸಿ ಸಿವಿಕ್ ಗ್ರೂಪ್’ ಎಂಬ ಹೆಸರಿನಲ್ಲಿ ರಚಿಸಲಾಯಿತು.
ಪಾರ್ಕ್ ಗಳನ್ನು ಅಭಿವೃದ್ಧಿಪಡಿಸುವಲ್ಲಿ ನಾಗರಿಕರು ಮತ್ತು ವಾರ್ಡ್ ಸಮಿತಿಗಳನ್ನು ತೊಡಗಿಸಿಕೊಳ್ಳಲು ಮಂಗಳೂರು ಸಿವಿಕ್ ಗ್ರೂಪ್ ಮೂಡಾಗೆ ಮನವಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.