ಬೇಸಿಗೆಯ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಚಿಂಚಾಪಾನಕ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಮಲಬದ್ಧತೆಯಿಂದ ಪಾರು ಮಾಡುತ್ತದೆ. ಹಾಗಾದರೆ ಏನಿದು ಚಿಂಚಾಪಾನಕ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡದಿರದು. ಇದು ಆಯುಷ್ ಇಲಾಖೆಯ ವತಿಯಿಂದ ತಯಾರಿಸಿದ ಆಯುಷ್ ಪಾನೀಯವಾಗಿದೆ.
ಇದನ್ನು ಮನೆಯಲ್ಲಿಯೇ ತಯಾರು ಮಾಡಿ ಸೇವಿಸುವುದರಿಂದ ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಕಾರಿಯಾಗಲಿದೆ. ಪ್ರತಿಯೊಬ್ಬರೂ ಇದನ್ನು ತಯಾರಿಸಿಟ್ಟುಕೊಂಡು ಸೇವಿಸುತ್ತಾ ಬಂದರೆ ನಮ್ಮ ಆರೋಗ್ಯ ನಮ್ಮ ಕೈನಿಂದಲೇ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.
ಚಿಂಚಾಪಾನಕ ತಯಾರಿಸಲು ಹೆಚ್ಚೇನು ಕಷ್ಟವಿಲ್ಲ. ಜತೆಗೆ ಮನೆಯಲ್ಲಿರುವ ಪದಾರ್ಥಗಳಿಂದಲೇ ಇದನ್ನು ತಯಾರಿಸಬಹುದಾಗಿದೆ. ಹುಣಸೆಹಣ್ಣು, ಬೆಲ್ಲದ ಪುಡಿ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಸೈಂದವ ಲವಣವಿದ್ದರೆ ಸಾಕು ಚಿಂಚಾ ಪಾನಕ ತಯಾರು ಮಾಡಬಹುದಾಗಿದೆ. ಈ ಸಮಯದಲ್ಲಿ ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮಲಬದ್ಧತೆ ನಿವಾರಿಸುತ್ತದೆ, ಶರೀರದ ದಾಹ ಹಾಗೂ ಬಾಯಾರಿಕೆಯನ್ನು ನೀಗಿಸುತ್ತದೆ.
ಹುಣಸೆ ಹಣ್ಣನ್ನು ಅಗತ್ಯ ಪ್ರಮಾಣದ ನೀರಿನಲ್ಲಿ ರಾತ್ರಿಯಿಡೀ ನೆನೆಸಿಟ್ಟು ಮರುದಿನ ಬೆಳಿಗ್ಗೆ ಅದನ್ನು ಶುದ್ಧವಾದ ಕೈಗಳಿಂದ ಚೆನ್ನಾಗಿ ಹಿಸುಕಿ ಸೋಸಿಕೊಳ್ಳಬೇಕು (ಗಾಡವಾದ ಹುಣಸೆ ಮಿಶ್ರಣ ಬಾಟಲಿಗಳಲ್ಲಿ ತುಂಬಿಸಿಕೊಂಡು ಪಾನಕ ತಯಾರಿಸುವಾಗ ಬೇಕಾದಷ್ಟನ್ನು ಬಳಸಿಕೊಳ್ಳಬಹುದು). ಅಗತ್ಯ ಪ್ರಮಾಣದಷ್ಟು ನೀರನ್ನು ಪಾತ್ರೆಗೆ ಹಾಕಿಕೊಳ್ಳಿ. ಅಗತ್ಯ ಪ್ರಮಾಣದಷ್ಟು ಹುಣಸೆ ಹಣ್ಣಿನ ಮಿಶ್ರಣವನ್ನು ಆ ನೀರಿನ ಪಾತ್ರೆಗೆ ಹಾಕಬೇಕು. ಇದಾದ ನಂತರ ಬೆಲ್ಲದ ಪುಡಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕರಗಿಸಿ ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಸೈಂದವ ಲವಣವನ್ನು ಸೇರಿಸಿದರೆ ಚಿಂಚಾಪಾನಕ ರೆಡಿಯಾದಂತೆಯೇ..
ಮೊದಲ ಬಾರಿಗೆ ಮಾಡುವಾಗ ಯಾವುದು ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬ ಅಂದಾಜು ಸಿಗದೆ ತೊಂದರೆಯಾಗಬಹುದು ಹೀಗಾಗಿ ಚಿಂಚಾ ಪಾನಕವನ್ನು ತಯಾರಿಸುವಾಗ ಹುಣಸೆಹಣ್ಣು – 100 ಗ್ರಾಂ, ಬೆಲ್ಲದ ಪುಡಿ – 400 ಮಿಲಿ, ಜೀರಿಗೆ ಪುಡಿ – 10 ಗ್ರಾಂ, ಕಾಳು ಮೆಣಸಿನಪುಡಿ – 5 ಗ್ರಾಂ, ಸೈಂದವ ಲವಣ – 5 ಗ್ರಾಂ ಹಾಕಿ ತಯಾರು ಮಾಡಿಕೊಳ್ಳಬೇಕು. ಇದನ್ನು 50 ರಿಂದ 100 ಮಿಲಿ ಸೇವನೆ ಮಾಡುವುದು ಒಳ್ಳೆಯದು.