ಚಿಕ್ಕಮಗಳೂರು: ಚಿಕ್ಕಮಗಳೂರು ಜೈನ್ ಶ್ವೇತಾಂಬರ್ ಯುವಕ ಪರಿಷತ್ ಹಾಗೂ ಕಂಪಾನಿಯೋ ಸಂಸ್ಥೆಯ ಆಶ್ರಯದಲ್ಲಿ ಲಯನ್ಸ್ ಸೇವಾ ಭವನದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ಶಿಬಿರವನ್ನು ತೇರಾಪಂಥ್ ಸಭಾಧ್ಯಕ್ಷ ತಾರಾಚಂದ್ ಜೈನ್ ಉದ್ಘಾಟಿಸಿ ಮಾತನಾಡಿ ಲಯನ್ಸ್ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮದ ಪ್ರಯೋಜನವನ್ನು ಸಾರ್ವಜನಿಕರು ಪಡೆಯುವಂತೆ ಮನವಿ ಮಾಡಿದರು.
ಕಂಪಾನಿಯೋ ಸಂಸ್ಥೆಯ ಮುಖ್ಯಸ್ಥ ಶಶಿಕಾಂತ್ ಮಾತನಾಡಿ ಫೂಟ್ ಪಲ್ಸ್ ಥೆರಪಿ ಚಿಕಿತ್ಸೆ ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾಗಿದ್ದು, ವೈದ್ಯಕೀಯವಾಗಿ ಪ್ರಮಾಣಿತವಾಗಿದೆ. ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ವಿಧದ ಮತ್ತು ಧೀರ್ಘಕಾಲದ ಸಮಸ್ಯೆಗಳನ್ನು ಔಷಧಿ ರಹಿತವಾಗಿ, ಅಡ್ಡಪರಿಣಾಮಗಳಿಲ್ಲದೇ ಪರಿಹರಿಸಬಹುದಾಗಿದೆ ಎಂದರು.
ಈ ಚಿಕಿತ್ಸೆ ೩೦ ನಿಮಿಷ TENS ಮತ್ತು EMS ಥೆರಪಿಯಿಂದ ನಮ್ಮ ದೇಹದಲ್ಲಿ ೫ ಕಿ.ಮೀ. ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರ ಮಾಡಲು ಈ ಚಿಕಿತ್ಸೆ ಸಹಕಾರಿಯಾಗಲಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಯಲ್ಲಿ ದೇಶಾದ್ಯಂತ ೩೫೦ ಶಾಖೆಗಳನ್ನು ಹೊಂದಿರುವ ಈ ಸಂಸ್ಥೆಯಿಂದ ಈವರೆಗೆ ೧೦ ಲಕ್ಷಕ್ಕೂ ಹೆಚ್ಚಿನ ಜನ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಚಿಕಿತ್ಸೆಯಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಸ್ನಾಯು ಸೆಳೆತ, ನಿದ್ರಾಹೀನತೆ, ಮಂಡಿ ನೋವು, ಬೆನ್ನು ನೋವು, ಸಂಧಿವಾತ, ಪಾರ್ಕಿನ್ಸನ್, ಪಾರ್ಶ್ವವಾಯು, ಥೈರಾಯ್ಡ ಮತ್ತು ಬೊಜ್ಜಿನಂತಹ ಕಾಯಿಲೆಗಳನ್ನು ನಿಯಂತ್ರಿಸಬಹುದಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಮಾತನಾಡಿ ೨೦೧೮ ರಿಂದ ಈವರೆಗೆ ರಾಜ್ಯದ ಎಲ್ಲಾ ಕಡೆ ಈ ತರಬೇತಿ ಶಿಬಿರವನ್ನು ನಡೆಸಲಾಗಿದೆ ಎಂಬ ಮಾಹಿತಿ ಇದ್ದು, ಲಯನ್ಸ್ ಸಂಸ್ಥೆಯಲ್ಲಿ ಮೊದಲ ಶಿಬಿರವನ್ನು ಲಯನ್ಸ್ ಸಂಸ್ಥೆಯ ಮೂಲಕವೇ ಹಮ್ಮಿಕೊಳ್ಳ ಲಾಗಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ ಎಂದು ತಿಳಿಸಿದರು.
ಲಯನ್ಸ್ ಸುವರ್ಣ ಮಹೋತ್ಸವ ಆಚರಣೆಯ ಈ ವರ್ಷದಲ್ಲಿ ಲಯನ್ಸ್ ಸಂಸ್ಥೆ ವರ್ಷವಿಡೀ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಪರಿಸರ ಸಂರಕ್ಷಣೆ ಮತ್ತು ಆರೋಗ್ಯ ರಕ್ಷಣಾ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ಈ ತರಬೇತಿ ಚಿಕಿತ್ಸಾ ಶಿಬಿರದ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಚಿಕ್ಕಮಗಳೂರು ತೇರಾಪಂಥ್ ಯುವಕ ಪರಿಷತ್ನ ಅಧ್ಯಕ್ಷ ನಿತೀಶ್ ಜೈನ್ ಹಾಗೂ ತೇರಾಪಂಥ್ ಟ್ರಸ್ಟ್ನ ಮಂಜುಳರವರು ಮಾತನಾಡಿ ಕಂಪಾನಿಯೋ ಸಂಸ್ಥೆ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರದ ಪ್ರಯೋಜನ ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಲಯನ್ಸ್ ಕ್ಲಬ್ ಖಜಾಂಚಿ ಬಾಲಕೃಷ್ಣ ಧ್ವಜವಂದನೆ ಬೋಧಿಸಿದರು. ಲಯನ್ ಸಂತೋಷ್ ಲಯನ್ಸ್ ನೀತಿ ಸಂಹಿತೆಯನ್ನು ಬೋಧಿಸಿದರು. ಲಯನ್ಸ್ ಮಾಜಿ ಗೌರ್ನರ್ ಹೆಚ್.ಆರ್. ಹರೀಶ್, ಲಯನ್ ಪ್ರೊ.ಜಗದೀಶಪ್ಪ, ಸದಸ್ಯರಾದ ಕೆ.ಎಸ್. ನಾಗರಾಜ್, ಕೆ.ಡಿ. ಪುಟ್ಟಣ್ಣ, ಲಯನ್ ಕೇಶವಮೂರ್ತಿ, ಲಯನ್ ಪುಷ್ಪರಾಜ್, ಲಯನ್ಸ್ ಉಪಾಧ್ಯಕ್ಷ ಪ್ರಮೋದ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಸ್ವಾಗತಿಸಿ, ಕಾರ್ಯದರ್ಶಿ ಟಿ. ನಾರಾಯಣಸ್ವಾಮಿ ವಂದಿಸಿದರು.