ಪುತ್ತೂರು: ಅಳಿಕೆ ಮೂಲದ ಗೌರಿ ಎಂಬಾಕೆಗೆ ಆ.25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದ ಮಹಿಳಾ ಪೊಲೀಸ್ ಠಾಣೆ ಬಳಿ ಪದ್ಮರಾಜ್ ಎಂಬಾತ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದ. ಬಳಿಕ ಚೂರಿ ಇರಿತಗೊಳಗಾಗಿ ಗಂಭೀರ ಗಾಯಗೊಂಡ ಯುವತಿ ಮೃತಪಟ್ಟಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದ ಸಿಸಿ ಟಿವಿ ದೃಶ್ಯವೊಂದು ಲಭ್ಯವಾಗಿದೆ.
ಕೊಲೆಗೆ ಮೊದಲು ಯುವತಿ ಗೌರಿಯೊಂದಿಗೆ ಆರೋಪಿ ಪದ್ಮರಾಜ್ ಜಗಳ ಮಾಡಿರುವ ದೃಶ್ಯ, ಗೌರಿ ಕೆಲಸ ಮಾಡುತ್ತಿದ್ದ ಫ್ಯಾನ್ಸಿ ಅಂಗಡಿಯಲ್ಲಿದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಗೌರಿಯನ್ನು ಹಿಡಿದು ಎಳೆಯುತ್ತಿರುವ ಆರೋಪಿ ಪದ್ಮರಾಜ್, ಹಲ್ಲೆ ನಡೆಸಿ ಆಕೆಯ ಮೊಬೈಲ್ ಕಸಿದುಕೊಂಡು ಹೋಗಿದ್ದಾನೆ. ಬಳಿಕ ಬೇರೆ ಮೊಬೈಲ್ ನಿಂದ ಕರೆ ಮಾಡಿ ತನ್ನ ಫೋನ್ ಕೊಡುವಂತೆ, ಅಲ್ಲದೆ ಮಹಾಲಿಂಗೇಶ್ವರ ದೇವಾಸ್ಥಾನದ ಕೆರೆ ಬಳಿ ಆತನನ್ನು ಬರುವಂತೆ ಕೇಳಿಕೊಂಡಿದ್ದಾಳೆ.
ಮಾಣಿ ಕಡೆ ತೆರಳಿದ್ದ ಪದ್ಮರಾಜ್ ವಾಪಾಸ್ಸು ಪುತ್ತೂರಿಗೆ ಬೈಕ್ ನಲ್ಲಿ ಬಂದಿದ್ದಾನೆ. ನೇರವಾಗಿ ದೇವಸ್ಥಾನದ ಕೆರೆ ಸಮೀಪ ಬಂದಿದ್ದ ಆತ ಅಲ್ಲಿಯೂ ಗೌರಿಯ ಜೊತೆ ಜಗಳ ಮಾಡಿದ್ದಾನೆ. ಜಗಳ ತಾರಕ್ಕೇರಿದಾಗ ತನ್ನ ಬಳಿಯಿದ್ದ ಚಾಕುವಿನಿಂದ ಗೌರಿಯ ಕತ್ತು ಸೀಳಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಗೌರಿಯನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಆಕೆ ಮೃತಪಟ್ಟಿದ್ದಾಳೆ.