ತಿರುವನಂತಪುರಂ: ಕೇರಳದ ಪುನ್ನತ್ತೂರು ಕೊಟ್ಟಾದಲ್ಲಿರುವ ಗುರುವಾಯೂರು ದೇವಸ್ವಂ ಆನೆ ಶಿಬಿರದಲ್ಲಿ ಆನೆಯೊಂದು ತನ್ನ ಮಾವುತನನ್ನೆ ತಿವಿದು ಕೊಂದಿರುವ ಘಟನೆ ವರದಿಯಾಗಿದೆ.
ಚಂದ್ರಶೇಖರನ್ ಹೆಸರಿನ ಒಂಟಿ ದಂತದ ಆನೆಯು ಅಶಿಸ್ತಿನಿಂದ ವರ್ತಿಸುತ್ತಿದ್ದಲ್ಲದೆ ಅಪಾಯಕಾರಿಯಾಗಿ ವರ್ತಿಸುತ್ತಿದ್ದ ಕಾರಣ ಅದನ್ನು ಎಂದಿಗೂ ಶಿಬಿರದಿಂದ ಹೊರತರಲಾಗುತ್ತಿರಲಿಲ್ಲ. ಈ ಹಿಂದೆ ಆನೆ ಹಲವು ಬಾರಿ ಮತ್ತೇರಿದಂತೆ ವರ್ತಿಸಿದ ವೇಳೆ ಅರಿವಳಿಕೆ ನೀಡಿ ಸಮಾಧಾನ ಮಾಡಲಾಗುತ್ತಿತ್ತು. ಬುಧವಾರ ಮಧ್ಯಾಹ್ನ ರತೀಶ್ ಎಂಬ ಮಾವುತ ಆನೆಗೆ ನೀರು ಕುಡಿಸಲು ಹೋದಾಗ ಆತ ತನಗೆ ತೊಂದರೆ ನೀಡಲು ಬಂದಿದ್ದಾನೆ ಎಂದು ಭಾವಿಸಿ ತುಳಿದು ಬಿಟ್ಟಿದೆ. ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.