ಬೀದರ್: ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡ ಗ್ರಾಮದಲ್ಲಿ ಕಳೆದ ಆಗಸ್ಟ್ 17 ರಂದು ಮನೆಯಲ್ಲಿ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು ಬಾಲಕಿ ಆತ್ಮಹತ್ಯೆ ಗ್ರಾಮದ ಓರ್ವ ಯುವಕನ ನಿರಂತರ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿದೆ .
ಬೇಮಳಖೇಡಾ ಗ್ರಾಮದ ಭಾಗಮ್ಮ (ಪ್ರಿಯಾಂಕಾ) ಮರಕುಂದಾ ಎನ್ನುವ ಬಾಲಕಿಗೆ ಅದೇ ಗ್ರಾಮದ ಯುವಕನೋರ್ವ ಪರಿಚಯವಾಗಿ ಸಲುಗೆ ಬೆಳೆದಿದೆ .
ಬೀದರನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿ ಯುವಕನ ಜೊತೆಗೆ ಸಲಿಗೆಯಿಂದ ಅನೇಕ ಬಾರಿ ಮೊಬೈಲ್ನಲ್ಲಿ ಮಾತನಾಡಿದ್ದಾಳೆ .
ಬಾಲಕಿಯ ಭಾವಚಿತ್ರ ಕೂಡ ಯುವಕನ ಮೊಬೈಲ್ನಲ್ಲಿ ಸೆರೆಯಾಗಿದ್ದು ಇದನ್ನೇ ಬಂಡವಾಳ ಮಾಡಿಕೊಂಡ ಅಂಬರೀಶ ತಂದೆ ರಾಜಪ್ಪ ಶಿರಸಿ ಬಾಲಕಿಗೆ ಹೆದರಿಸಿ ಹಣಕ್ಕಾಗಿ ಪೀಡಿಸಲು ಪ್ರಾರಂಭಿಸಿದ್ದಾನೆ . ಬಡ ಬಾಲಕಿ ಒಂದೆರಡು ಬಾರಿ ಹಣವನ್ನೂ ಯುವಕನಿಗೆ ಫೋನ್ಪೇ ಮೂಲಕ ತಲುಪಿಸಿದ್ದಾಳೆ .
ಬಾಲಕಿ ಅತಿರೇಕತನದ ಕ್ರಮ ಕೈಗೊಳ್ಳುವ ಮೂರ್ನಾಲ್ಕು ದಿನಗಳ ಮೊದಲು ಸಾಮಾಜಿ ಕ ಜಾಲತಾಣದಲ್ಲಿ ಬಾಲಕಿಯ ಭಾವಚಿತ್ರಗಳನ್ನು ಅಪ್ಲೋಡ್ ಮಾಡಿದ್ದ ಯುವಕ ಮತ್ತೆ ಹಣಕ್ಕಾಗಿ ಪೀಡಿಸಿದ್ದಾನೆ ಮತ್ತು ಆಕೆ ಆತ್ಮಹತ್ಯೆಗೆ ಒಂದು ಗಂಟೆ ಮುಂಚಿತವಾಗಿ ಪೋನ್ ಮಾಡಿ ಎಲ್ಲ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ನಿನ್ನ ಹಾಗೂ ನಿನ್ನ ಮನೆಯವರ ಮಾನ ಕಳೆಯುವುದಾಗಿ ಹೆದರಿಸಿದ್ದಾನೆ.
ದಿಕ್ಕು ತೋಚದ ಬಾಲಕಿ ಅದೇ ದಿನ ಮಧ್ಯಾಹ್ನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಂಬರೀಶ್ ಕಿರುಕುಳದಿಂದ ನನ್ನ ಮಗಳ ಸಾವು: ತಾಯಿಯ ಆರೋಪ
ಕಳೆದೊಂದು ವರ್ಷದಿಂದ ಇವರಿಬ್ಬರು ಪ್ರೀತಿಸುತ್ತಿದ್ದರು, ಅದೇ ಪ್ರೀತಿಯ ಸಲುಗೆಯಿಂದ ಇಬ್ಬರು ಪೋಟೋ ತೆಗೆಸಿಕೊಂಡಿದ್ದಾರೆ. ಕೆಲವು ವಿಡಿಯೋಗಳನ್ನು ಅಂಬರೀಶ ತಂದೆ ರಾಜಪ್ಪ ಶಿರಸಿ ಮಾಡಿಕೊಂಡು ತನ್ನ ಮೊಬೈಲ್ನಲ್ಲಿ ಇಟ್ಟುಕೊಂಡಿದ್ದ.
ನಂತರ ಪ್ರಿಯಾಂಕಾಳಿಗೆ ಹಣ ನೀಡುವಂತೆ ಪೀಡಿಸಿದ್ದಾನೆ. ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ.