ಮೈಸೂರು: ಮೊನ್ನೆ ಮೊನ್ನೆಯಷ್ಟೆ ಸಂಸತ್ ಭವನದಲ್ಲಿ ಕಲರ್ ಬಾಂಬ್ ದಾಳಿ ನಡೆಸಿದ ಯುವಕ ಮನೋರಂಜನ್ ಮನೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಗುಪ್ತಚರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಶೋಧ ಕಾರ್ಯ ನಡೆಸಿದರು.
ಬೆಳಗ್ಗೆ ಮನೋರಂಜನ್ ಮನೆಗೆ ಭೇಟಿ ನೀಡಿದ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಅಧಿಕಾರಿಗಳು ಆತನ ರೂಂನಲ್ಲಿದ್ದ ಕೆಲವು ಸಾಕ್ಷ್ಯಾಧಾರ ಕಲೆ ಹಾಕಿದರು. ಬಳಿಕ ಕೋಣೆಯನ್ನು ಸೀಜ್ ಮಾಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜಯನಗರ ಠಾಣೆ ಪೊಲೀಸರು ಮನೋರಂಜನ್ ಮನೆಗೆ ಬಂದೋಬಸ್ತ್ ಮುಂದುವರಿಸಿದ್ದಾರೆ.
ಮನೋರಂಜನ್ಗೆ ಸಂಬಂಧಿಸಿದ ಇಂಚಿಂಚು ಮಾಹಿತಿಗಳನ್ನು ತನಿಖಾ ತಂಡದ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಮನೋರಂಜನ್ ತಂದೆಯ ಪ್ರಕಾರ ಆತ ಅವರ ಬಳಿ ಹೆಚ್ಚಾಗಿ ಹಣ ಪಡೆಯುತ್ತಿರಲಿಲ್ಲ. ಕೆಲಸ ಕೂಡ ಮಾಡುತ್ತಿರಲಿಲ್ಲ. ಆದರೂ ಆತನಿಗೆ ಹೊರ ರಾಜ್ಯದ ಇತರೆ ಆರೋಪಿಗಳ ಸಂಪರ್ಕವಾಗಿದ್ದು ಹೇಗೆ? ಮೈಸೂರಿನಿಂದ ಬೆಂಗಳೂರು, ದಿಲ್ಲಿಗೆ ವಿಮಾನದಲ್ಲಿ ಓಡಾಡಲು ಹಣ ಎಲ್ಲಿಂದ ಬರುತ್ತಿತ್ತು ಎಂಬುದು ಸೇರಿದಂತೆ ಎಲ್ಲ ಮಾಹಿತಿಗಳ ಬೆನ್ನತ್ತಿರುವ ತನಿಖಾಧಿಕಾರಿಗಳು, ಮನೋರಂಜನ್ ಬಳಸುತ್ತಿದ್ದ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ವಿಜಯ ನಗರ 2 ನೇ ಹಂತದಲ್ಲಿರುವ ಮನೆಗೆ ಗುರುವಾರ ಬೆಳಗ್ಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ದಾಂಧಲೆ ನಡೆಸಿದ ಯುವಕ ತಂದೆ ದೇವರಾಜೇಗೌಡ ಮತ್ತು ಶೈಲಜಾ ಅವರಿಂದ ಮಾಹಿತಿ ಪಡೆದುಕೊಂಡರು.