ಮೈಸೂರು: ಸಂಸತ್ ಭವನಕ್ಕೆ ನುಗ್ಗಿ ಕೋಲಾಹಲ ಎಬ್ಬಿಸಿದ ಹಿನ್ನಲೆ ಮೈಸೂರಿನ ವಿಜಯನಗರದಲ್ಲಿರುವ ಆರೋಪಿ ಮನೋರಂಜನ್ ನಿವಾಸದ ಮೇಲೆ ಪೊಲೀಸರು ಕಣ್ಗಾವಲಿರಿಸಿದ್ದಲ್ಲದೆ, ಸುತ್ತ ಮುತ್ತಲಿನ ಮನೆಯವರ ವಿಚಾರಣೆ ನಡೆಸಿದ್ದಾರೆ.
ಮನೋರಂಜನ್ ಮನೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಆತನ ನಿವಾಸದ ಮೇಲೆ ಕಣ್ಗಾವಲು ಇರಿಸಲಾಗಿದೆ. ಇದರ ನಡುವೆ ಮನೋರಂಜನ್ ಮನೆಗೆ ಸ್ಟೇಟ್ ಇಂಟೆಲಿಜೆಂಟ್ ಹಾಗೂ ಕೇಂದ್ರ ಗುಪ್ತಚರ ಪೊಲೀಸರು ಭೇಟಿ ನೀಡಿ ಮನೋರಂಜನ್ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಕೇಂದ್ರ ಗುಪ್ತಚರ ಇಲಾಖೆ ಮೈಸೂರು ವಿಭಾಗದ ಉಪನಿರ್ದೇಶಕ ಪ್ರವೀಣ್ ನೇತೃತ್ವದಲ್ಲಿ ಮನೋರಂಜನ್ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಣೆ ಮಾಡಿದರಲ್ಲದೆ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮನೆಯಲ್ಲಿ ತಪಾಸಣೆ ಮಾಡಿದರು. ಮನೋರಂಜನ್ ರೂಂನಲ್ಲಿ ಇಂಚಿಂಚೂ ಪರಿಶೀಲನೆ ನಡೆಸಿದ್ದಾರೆ.
ಸಂಸತ್ ಭವನದೊಳಗೆ ಗ್ಯಾಸ್ ಕ್ಯಾನಿಸ್ಟರ್ ಹಾಕಿದ ಪ್ರಕರಣದ ಆರೋಪಿ ಉತ್ತರ ಪ್ರದೇಶದ ಸಾಗರ್ ಶರ್ಮಾ ಮೈಸೂರಿನಲ್ಲಿರುವ ಮನೋರಂಜನ್ ಮನೆಗೆ ಭೇಟಿ ನೀಡಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
ಕಳೆದ ಮೇ ತಿಂಗಳಿನಲ್ಲಿ ಸಾಗರ್ ಶರ್ಮಾ ಮೈಸೂರಿಗೆ ಆಗಮಿಸಿ, ಮನೋರಂಜನ್ ಮನೆಗೆ ಭೇಟಿ ನೀಡಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭವಾಗಿದೆ. ಮೇ ಅಷ್ಟೇ ಅಲ್ಲದೇ ಹಿಂದೆಯೂ ಒಂದು ಬಾರಿ ಮನೆಗೆ ಬಂದಿದ್ದ ಎನ್ನಲಾಗಿದೆ.
ಸಾಗರ್ ಶರ್ಮಾ ಮೈಸೂರು ಭೇಟಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಮೈಸೂರು ಪೊಲೀಸರು ಅವನು ಮೈಸೂರಿಗೆ ಬಂದಾಗ ಯಾರನ್ನು ಭೇಟಿ ಮಾಡಿದ್ದ? ಯಾವ ಸ್ಥಳಗಳಿಗೆ ತೆರಳಿದ್ದ ಎಂಬ ಬಗ್ಗೆಯೂ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳು ಸಂಸತ್ ಪ್ರವೇಶಿಸಿ ಕೋಲಾಹಲ ಸೃಷ್ಟಿಸಲು ಕೆಲ ತಿಂಗಳ ಮೊದಲೇ ಸಂಚು ರೂಪಿಸಿದ್ದರೆಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ತಂದೆ ದೇವರಾಜೇಗೌಡರ ಪರಿಚಯ ಹೇಳಿಕೊಂಡು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಮನೋರಂಜನ್ ಪಾಸ್ ಪಡೆದಿರುವುದು ಗೊತ್ತಾಗಿದೆ. ತಾನು ಮೈಸೂರಿನ ವಿಜಯನಗರ ನಿವಾಸಿ. ತನ್ನ ತಂದೆ ದೇವರಾಜೇಗೌಡ ಎಂದು ತನ್ನ ಪರಿಚಯ ಮಾಡಿಕೊಂಡು ಪ್ರತಾಪ್ ಸಿಂಹ ಬಳಿ ಪಾಸ್ಗೆ ಮನೋರಂಜನ್ ಅನುಮತಿ ಪಡೆದುಕೊಂಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಮಂಗಳವಾರ ಮಧ್ಯಾಹ್ನ ದೆಹಲಿಯ ಸಂಸದರ ಕಚೇರಿಗೆ ಹೋಗಿದ್ದ ಮನೋರಂಜನ್ ತನ್ನ ಜೊತೆಗೆ ಸಾಗರ್ ಶರ್ಮನನ್ನು ಕರೆದುಕೊಂಡು ಹೋಗಿದ್ದ. ಈ ವೇಳೆ ಸಾಗರ್ ಶರ್ಮ ತನ್ನ ಸಹೋದ್ಯೋಗಿ ಎಂದು ಸಂಸದರ ಕಚೇರಿ ಸಿಬ್ಬಂದಿಗೆ ಪರಿಚಯಿಸಿದ್ದ ಎನ್ನಲಾಗಿದೆ.
ಒಂದು ಪಾಸ್ನಲ್ಲಿ ಇಬ್ಬರು ಸಂಸತ್ ಪ್ರವೇಶ ಮಾಡುವ ಅವಕಾಶ ಇದ್ದು, ಅದರಲ್ಲಿ ಒಂದು ಪಾಸ್ನಲ್ಲಿ ಮನೋರಂಜನ್ ಹಾಗೂ ಸಾಗರ್ ಶರ್ಮ ಸಂಸತ್ ಪ್ರವೇಶ ಮಾಡಿದ್ದರು. ಮನೋರಂಜನ್ ಸಂಸತ್ತಿನಲ್ಲಿ ಶೂ ತಪಾಸಣೆ ಮಾಡುವುದಿಲ್ಲ ಎಂಬುದನ್ನು ಮೊದಲೇ ಖಚಿತಪಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಂದ ಪ್ರವೇಶ ಪಾಸ್ ಪಡೆದು ಬುಧವಾರ ಲೋಕಸಭೆ ಪ್ರವೇಶಿಸಿದ್ದ ಮನೋರಂಜನ್, ಸಂಸತ್ತಿನ ಪ್ರವೇಶದ ಸಮಯದಲ್ಲಿ ಶೂಗಳನ್ನು ಪರಿಶೀಲಿಸುವುದಿಲ್ಲ ಎಂಬುದನ್ನು ಕಳೆದ ಜುಲೈನ ಖಚಿತಪಡಿಸಿಕೊಂಡಿದ್ದ ಎನ್ನಲಾಗಿದೆ. ಜುಲೈನಲ್ಲಿ ದೆಹಲಿಗೆ ಬಂದಿದ್ದ ಮನೋರಂಜನ್, ಸಂಸದರ ಹೆಸರಿನಲ್ಲಿ ನೀಡಲಾದ ವಿಸಿಟರ್ ಪಾಸ್ನಲ್ಲಿ ಸಂಸತ್ ಭವನ ಪ್ರವೇಶಿಸಿದ್ದ. ಪರಿಶೀಲನೆ ವೇಳೆ ಬೂಟುಗಳನ್ನು ತಪಾಸಣೆ ಮಾಡುವುದಿಲ್ಲ ಎಂಬುದನ್ನು ಆತ ತಿಳಿದುಕೊಂಡಿದ್ದ ಎಂದು ಹೇಳಲಾಗುತ್ತಿದೆ.