ನವದೆಹಲಿ: ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿಯವರು ಕಳೆದ ತಿಂಗಳು ಜೈಪುರದ ತಮ್ಮ ಮನೆಯಲ್ಲಿ ಹತ್ಯೆಯಾಗಿದ್ದು, ಕೊಲೆಯ ಶಂಕಿತ ಆರೋಪಿ ಅಶೋಕ್ ಮೇಘವಾಲ್ ನನ್ನು ಬಂಧಿಸಲಾಗಿದೆ. ಇದುವರೆಗೆ ಒಟ್ಟು ೯ ಜನರನ್ನು ಬಂಧಿಸಲಾಗಿದೆ.
ಉಗ್ರ ನಿಗ್ರಹ ದಳದ ಮೂರು ತಂಡ ರಾಜಸ್ಥಾನದ ಪಿಲನಿಯ ಹಳ್ಳಿಯೊಂದರ ಮೇಲೆ ದಾಳಿ ನಡೆಸಿ ಸತತ ೧೦ ಗಂಟೆಗಳ ಶೋಧಕಾರ್ಯ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ರಾಜಸ್ಥಾನ ಮತ್ತು ಹರಿಯಾಣದ ಒಟ್ಟು ೩೧ ಕಡೆಗಳಲ್ಲಿ ಎನ್.ಐ.ಎ ದಾಳಿ ನಡೆಸಲಾಗಿತ್ತು. ಈ ವೇಳೆ ಭಾರೀ ಪ್ರಮಾಣದ ಪಿಸ್ತೂಲುಗಳು, ಮೊಬೈಲ್, ಸಿಮ್ ಕಾರ್ಡ್ ಡಿ.ವಿ.ಆರ್ ಸೇರಿದಂತೆ ಹಲವು ಡಿಜಿಟಲ್ ಉಪಕರಣಗಳು, ಹಣಕಾಸಿನ ವ್ಯವಹಾರದ ಕುರಿತಾದ ಕೆಲ ಕಡತಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಅಶೋಕ್ ನಿಂದ ೮ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಲಾರೆನ್ಸ್ ಬಿಶ್ನೋಯ್ ಗ್ಯಾಂಗ್ ನ ಸದಸ್ಯ ರೋಹಿತ್ ಗೋದಾರನೊಟ್ಟಿಗೆ ಸಂಪರ್ಕದಲ್ಲಿದ್ದುದು ತಿಳಿದುಬಂದಿದೆ.
ಡಿಸೆಂಬರ್ ೫ರಂದು ಸುಖದೇವ್ ಸಿಂಗ್ ಗೊಗಮೆಡಿ ನಾಲ್ಕು ಜನರೊಂದಿಗೆ ತಮ್ಮ ಮನೆಯಲ್ಲಿ ಚಹಾ ಸೇವಿಸುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಇಬ್ಬರು ಬಂದೂಕುಧಾರಿಗಳಿಂದ ಆದ ದಾಳಿಯಲ್ಲಿ ಅವರು ಮೃತಪಟ್ಟಿದ್ದರು.