ಭಾರತವು ಭೋಜನಪ್ರಿಯರಿಂದಷ್ಟೇ ಅಲ್ಲ, ಇಲ್ಲಿನ ವಿಧವಿಧದ ತಿಂಡಿ ತಿನಿಸುಗಳಿಂದಲೂ ಪ್ರಸಿದ್ಧಿ ಪಡೆದಿದೆ. ಅದರಲ್ಲೂ ರಸ್ತೆ ಬದಿಯಲ್ಲಿ ಸಿಗುವ ಕುರುಕುಲು ತಿಂಡಿಗಳು ಜನರ ನಾಲಗೆಯಲ್ಲಿ ನೀರೂರಿಸುವಂತೆ ಇದ್ದರೂ ಅದನ್ನು ತಯಾರಿಸುವ ವಿಧಾನ ನೋಡಿದಾಗ ಎಂಥವರಾದರೂ ಅಸಹ್ಯಪಟ್ಟುಕೊಳ್ಳುತ್ತಾರೆ. ಹೀಗಿರುವಾಗ ಇಲ್ಲೊಬ್ಬ ವ್ಯಾಪಾರಿ ರೈಲಿನಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡ ರೀತಿ ಎಲ್ಲೆಡೆಗಳಿಂದ ಮೆಚ್ಚುಗೆ ಗಳಿಸುತ್ತಿದೆ.
ಸೂರ್ಯ ಮಾರ್ವಾಡಿ ಎಂಬ ಹೆಸರಿನ ವ್ಲಾಗರ್ ಹಂಚಿಕೊಂಡಿರುವ ವೀಡಿಯೋ ತುಣುಕಿನಲ್ಲಿ ಈ ವ್ಯಾಪಾರಿ ಕೈಗಳಿಗೆ ಗ್ಲೌಸ್ ತೊಟ್ಟು ಸೌತೆಕಾಯಿ, ಈರುಳ್ಳಿ, ಸೇವ್ ಮತ್ತು ಮಸಾಲೆಯನ್ನು ಚಮಚದಿಂದ ಬೆರಸಿ ಹಾಳೆಯ ತುಂಡಿನಲ್ಲಿ ವಿತರಿಸುವುದನ್ನು ಕಾಣಬಹುದು. ಆಹಾರವನ್ನು ಬರಿಗೈಯಿಂದ ಮುಟ್ಟುವುದನ್ನು ಆದಷ್ಟು ತಪ್ಪಿಸಿ ನೈರ್ಮಲ್ಯಕ್ಕೆ ಒತ್ತು ಕೊಟ್ಟಿರುವುದು ಎಲ್ಲರನ್ನು ಆಕರ್ಷಿಸಿದೆ.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅನೇಕರು ಇಷ್ಟಪಟ್ಟು ಕಾಮೆಂಟ್ ಮಾಡಿ ಆತನನ್ನು ಶ್ಲಾಘಿಸುತ್ತಿದ್ದಾರೆ.