ಕೊಡಗಿನ ವಿಶೇಷ ತಿನಿಸುಗಳಲ್ಲಿ ಒಂದಾದ ತಂಬಿಟ್ಟನ್ನು ಯಾರು ಬೇಕಾದರೂ ಮಾಡಬಹುದಾಗಿದೆ. ಸಾಮಾನ್ಯವಾಗಿ ಈ ಖಾದ್ಯವನ್ನು ಹುತ್ತರಿ ಹಬ್ಬದ ಸಮಯದಲ್ಲಿ ಹೆಚ್ಚಾಗಿ ಮಾಡಲಾಗುತ್ತದೆ. ಇದು ಹುತ್ತರಿ ಹಬ್ಬದ ಸ್ಪೆಷಲ್ ಎಂದರೂ ತಪ್ಪಾಗಲಾರದು. ಹಾಗಾದರೆ ಇದನ್ನು ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.
ಬೇಕಾಗುವ ಪದಾರ್ಥಗಳ ವಿವರ
ಕುಸಲಕ್ಕಿ- ಒಂದುಕಪ್
ತುಪ್ಪ- 2ಚಮಚ
ದ್ರಾಕ್ಷಿ- ಸ್ವಲ್ಪ
ಗೋಡಂಬಿ- ಸ್ವಲ್ಪ
ಎಳ್ಳು- ಕಾಲು ಕಪ್
ಏಲಕ್ಕಿ ಪುಡಿ- ಚಿಟಿಕೆಯಷ್ಟು
ಪಚ್ಚೆಬಾಳೆಹಣ್ಣು- 4
ಸಕ್ಕರೆ- ಸಿಹಿಗೆ ತಕ್ಕಂತೆ
ಉಪ್ಪು- ರುಚಿಗೆ ತಕ್ಕಂತೆ
ತೆಂಗಿನತುರಿ- ಅರ್ಧ ಕಪ್
ಹುರಿಗಡಲೆ- ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಕುಸಲಕ್ಕಿಯನ್ನು ಕೆಂಪಗೆ ಹುರಿದುಕೊಂಡು ಬಳಿಕ ನುಣ್ಣಗೆ ಪುಡಿಮಾಡಿಕೊಳ್ಳಬೇಕು. ಆ ಪುಡಿಯನ್ನು ತೆಗೆದುಕೊಂಡು ಅದರೊಂದಿಗೆ ಬಾಳೆಹಣ್ಣನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಬಾಳೆಹಣ್ಣು ಸಂಪೂರ್ಣ ಕರಗಿ ಅಕ್ಕಿಪುಡಿಯೊಂದಿಗೆ ಮಿಶ್ರವಾದ ಬಳಿಕ ಸಕ್ಕರೆ, ಕಾಯಿತುರಿ, ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿ ಇದಾದ ಬಳಿಕ ತುಪ್ಪದಲ್ಲಿ ಹುರಿದ ದ್ರಾಕ್ಷಿ,ಗೋಡಂಬಿ ಸೇರಿಸಿ, ಎಳ್ಳನ್ನು ಬಿಸಿ ಮಾಡಿ ಅದು ಸಿಡಿದ ಬಳಿಕ ಹಾಕಿ, ಜತೆಗೆ ಹುರಿಗಡಲೆಯನ್ನು ಹಾಕಿ ಮಿಶ್ರ ಮಾಡಿ ಬಳಿಕ ತಮಗೆ ಬೇಕಾದ ಅಳತೆಯಲ್ಲಿ ಉಂಡೆಗಳನ್ನು ಮಾಡಿದರೆ ಅಲ್ಲಿಗೆ ತಂಬಿಟ್ಟು ರೆಡಿ.