ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ವಿರುದ್ಧ ಅವರ ಸ್ವಂತ ಮಾವ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವರ್ತೂರು ಸಂತೋಷ್ ಮಹಿಳಾ ಪೀಡಕ, ಮಗಳ ಮೇಲೆ ದೌರ್ಜನ್ಯ ಮಾಡಿದ್ದಾರೆ, ಅವನೊಬ್ಬ ಮಾದಕ ವ್ಯಸನಿ ಎಂದು ಆರೋಪ ಮಾಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಅವರು ತಮ್ಮ ಮದುವೆ ವಿಷಯ ಪ್ರಸ್ತಾಪ ಮಾಡಿರಲಿಲ್ಲ. ಆದರೆ ಈಗ ವರ್ತೂರು ಸಂತೋಷ್ಗೆ ಮದುವೆ ಆಗಿರುವ ವಿಷಯ ಹೊರಬಿದ್ದಿದ್ದು, ಅವರಿಗೆ ಒಬ್ಬ ಮಗಳು ಸಹ ಇದ್ದಾಳೆ ಎನ್ನಲಾಗುತ್ತಿದೆ. ವರ್ತೂರು ಸಂತೋಷ್ ಅವರ ಮದುವೆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಾಧ್ಯಮದ ಜೊತೆ ಮಾತನಾಡಿರುವ ವರ್ತೂರು ಸಂತೋಷ್ ಅವರ ಪತ್ನಿ ಜಯಶ್ರೀ ಅವರ ತಂದೆ ಸೋಮನಾಥ್, ”ವರ್ತೂರು ಸಂತೋಷ್ ಒಬ್ಬ ಮೋಸಗಾರ, ಮಾದಕ ವ್ಯಸನಿ, ನನ್ನ ಮಗಳಿಗೆ ಅನ್ಯಾಯ ಮಾಡಿದ್ದಾನೆ. ಅವನೊಬ್ಬ ಮಾದಕ ವ್ಯಸನಿ” ಎಂದು ಆರೋಪಿಸಿದ್ದಾರೆ. ನನ್ನ ಮಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟೆ ಆದರೆ ಆಕೆಯ ಮೇಲೆ ದೌರ್ಜನ್ಯ ಮಾಡಿದ್ದಾನೆ, ಮದುವೆಯಾದ ಕೆಲವೇ ದಿನಕ್ಕೆ ಅವಳಿಂದ ವಿಚ್ಛೇದನ ಪಡೆಯುವಂತೆ ಅವನ ಮನೆಯವರೇ ಹೇಳಿಕೊಟ್ಟರು ಎಂದಿದ್ದಾರೆ.
”ಡ್ರಗ್ಸ್ ಹಾಕೊಳ್ಳೋದು, ಡ್ರಿಂಕ್ಸ್ ಮಾಡೋದು ಅಭ್ಯಾಸ ಅವನಿಗೆ ಒಂದು ಬಾರಿ ಸ್ಪಂದನಾ ಆಸ್ಪತ್ರೆಗೆ ಸೇರಿಸಿದ್ದರು, ಉಳಿಯೋದಿಲ್ಲ ಅಂದುಕೊಂಡಿದ್ದರು, ನಾನೇ ಹೋಗಿ ಅವನನ್ನು ನೋಡಿಕೊಂಡಿದ್ದೆ. ಎರಡು ಮೂರು ತಿಂಗಳು ಸುಧಾರಿಸಿ ಮನೆಗೆ ಕಳಿಸಿದ್ದೀನಿ. ಅವರ ಅಮ್ಮ ಇಲ್ಲದೆ ಇರೋದನ್ನೆಲ್ಲ ಹಾಕಿ ಕೊಡೋ ಕೆಲ್ಸಾ ಮಾಡ್ತಾರೆ. ಇವನು ಪ್ರತಿ ಸಂಜೆ ಬಂದು ಕುಡಿಯೋದು ನನ್ ಮಗಳನ್ನು ಹೊಡೆಯೋದು. ನಾನು ಮನೆಗೆ ಹೋಗಿದ್ದಾಗ ನನ್ನ ಎದುರಿಗೇ ಕತ್ತು ಕೊಯ್ಯುವುದಕ್ಕೆ ಚಾಕು ಎತ್ತಿದ್ದ. ಅವತ್ತು ಮನೆಯಲ್ಲಿ 30-40 ಜನ ಇದ್ದರು. ಎಲ್ಲ ದೊಡ್ಡೋರು, ಬುದ್ಧಿವಂತರೇ ಆದರೆ ಅವತ್ತೂ ಅವನು ಯಾರ ಮಾತು ಕೇಳಿರಲಿಲ್ಲ” ಎಂದರು.