ಮೈಸೂರು: ಮೈಸೂರು ರಂಗಾಯಣದ ನಿರ್ದೇಶಕಿಯಾಗಿ ರಂಗಕರ್ಮಿ ಭಾಗೀರಥಿ ಬಾಯಿ ಕದಂ ಇಂದು ಅಧಿಕಾರ ಸ್ವೀಕಾರ ಮಾಡಿದರು. ಈ ಹಿಂದೆ ಮೈಸೂರು ರಂಗಾಯಣದ ನಿರ್ದೇಶಕರಾಗಿ ನಿವೃತ್ತರಾಗಿದ್ದ ಜನಾರ್ಧನ ಅವರ ಸ್ಥಾನಕ್ಕೆ ಭಾಗೀರಥಿ ಬಾಯಿ ಕದಂ ಅವರನ್ನ ನಿರ್ದೇಶಕಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ನೇಮಕ ಮಾಡಿ ಆದೇಶ ಹೊರಡಿಸಿದರು. ಈ ಹಿನ್ನಲ್ಲೆಯಲ್ಲಿ ಇಂದು ರಂಗಾಯಣದ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಭಾಗೀರಥಿ ಬಾಯಿ ಕದಂ, ನನ್ನ ಕೆಲಸವನ್ನು ಗುರುತಿಸಿ ಸರ್ಕಾರ ನನಗೆ ರಂಗಾಯಣದ ಜವಾಬ್ದಾರಿ ನೀಡಿದೆ. ಮೂರು ವರ್ಷಗಳ ಕಾಲ ಪ್ರಾಮಾಣಿಕ ಕೆಲಸ ಕಾರ್ಯಗಳನ್ನು ಮಾಡುತ್ತೇನೆ. ಕಾರಂತರ ಕನಸುಗಳನ್ನು ನನಸು ಮಾಡಲು ಶ್ರಮಿಸುತ್ತೇನೆ ಎಂದರು.
ಇಂದಿನ ವಿದ್ಯಾರ್ಥಿಗಳಲ್ಲಿ ತಾವು ಬೇಗನೆ ಟಿವಿಯಲ್ಲಿ ಬರಬೇಕು ಎನ್ನುವ ಮನೋಭಿಲಾಷೆ ಇರಲಿದೆ. ಅದು ತಪ್ಪಲ್ಲ. ಆದರೆ ಅವರ ಕಲೆ ಗುರುತಿಸಿಕೊಳ್ಳುವ ರೀತಿಯಲ್ಲಿ ಇರಬೇಕು ಎಂದರು. ರಂಗಾಯಣಕ್ಕೆ ತನ್ನದೇ ಆದ ಇತಿಹಾಸವಿದೆ. ಮೊಬೈಲ್ ಥಿಯೇಟರ್ ಮಾಡಬೇಕು ಎನ್ನುವ ಆಸೆ ಇದೆ. ಎಲ್ಲರೂ ಕೈಜೋಡಿಸಿದರೆ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ತಿಳಿಸಿದರಲ್ಲದೇ, ಕಲಾವಿದರ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತೇನೆ ಎಂದರು.ಈ ಸಂದರ್ಭ ಕಲಾವಿದರಾದ ಪ್ರಕಾಶ್ ಬೆಳವಾಡಿ, ಮೈಮ್ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.