ಮಡಿಕೇರಿ: ಕನ್ನಡ ಚಲನ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂಗಳಿಂದ ಖ್ಯಾತರಾಗಿರುವ ಹುಚ್ಚ ವೆಂಕಟ್, ತಮ್ಮ ನಿರ್ದೇಶನದ ‘ತಿಕ್ಲ ಹುಚ್ಚ ವೆಂಕಟ್’ ಚಲನಚಿತ್ರವನ್ನು ಮುಂದಿನ ಐದಾರು ತಿಂಗಳ ಒಳಗಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ತಿಕ್ಲ ಹುಚ್ಚ ವೆಂಕಟ್ ಚಿತ್ರದ ಆಡಿಯೋ ಸಿಡಿಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಅವರು, ಪ್ರಕೃತಿ ರಮ್ಯ ತಾಣವಾದ ಕೊಡಗು ನನ್ನ ಅಚ್ಚುಮೆಚ್ಚಿನ ಸ್ಥಳವಾದ್ದರಿಂದ ಧ್ವನಿ ಸುರುಳಿ ಇಲ್ಲಿನ ಜನತೆಗೆ ತಲುಪಿಸುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.
ಚಲನಚಿತ್ರದ ಎಲ್ಲ ಹಾಡುಗಳನ್ನು ತಾವೇ ಬರೆದಿರುವುದಲ್ಲದೆ, ನಾಲ್ಕು ಹಾಡುಗಳನ್ನು ಖ್ಯಾತ ಹಿನ್ನೆಲೆ ಗಾಯಕರೊಂದಿಗೆ ಸೇರಿ ಹಾಡಿರುವುದಾಗಿ ತಿಳಿಸಿದರು. ಒಂದೆರಡು ಪಂಕ್ತಿಗಳನ್ನು ಇದೇ ಸಂದರ್ಭ ಹಾಡಿದರಲ್ಲದೆ, ತನ್ನ ಹಾಡನ್ನು ಜನತೆ ಮೆಚ್ಚಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಚಲನಚಿತ್ರದ ಹಾಡುಗಳನ್ನು ಹುಚ್ಚ ವೆಂಕಟ್ ಸೇರಿದಂತೆ ಅನುರಾಧ ಭಟ್, ವಾಣಿ ಹರಿಕೃಷ್ಣ, ಅನನ್ಯ ಭಟ್ ಹಾಡಿದ್ದು, ಸಂಗೀತವನ್ನು ಸತೀಶ್ ಬಾಬು ನೀಡಿದ್ದಾರೆ.
ಕೊಡಗಿನಲ್ಲಿ ಚಿತ್ರೀಕರಣ
ತಿಕ್ಲ ಹುಚ್ಚ ವೆಂಕಟ್ ಚಿತ್ರದ ಕೆಲವು ಹಾಡುಗಳ ಚಿತ್ರೀಕರಣವನ್ನು ಕೊಡಗಿನ ಮಡಿಕೇರಿ, ಭಾಗಮಂಡಲದಲ್ಲಿ ನಡೆಸಲಾಗುವುದು. ಇಬ್ಬರು ನಾಯಕಿಯರುಗಳಿದ್ದು, ತಾವು ನಾಯಕನ ಪಾತ್ರ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ನಗರದ ಸ್ವಚ್ಛತೆಯ ಜವಾಬ್ದಾರಿ ಹೊತ್ತ ಪೌರ ಕಾರ್ಮಿಕರ ಸಂಕಷ್ಟದ ಬದುಕು ಸಾಗಿಸುತ್ತಿದ್ದು, ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುವ ರೀತಿಯಲ್ಲಿ ತಿಕ್ಲ ಹುಚ್ಚ ವೆಂಕಟ್ ಚಿತ್ರವನ್ನು ತೆರೆಗೆ ತರಲು ಉದ್ದೇಶಿಸಲಾಗಿದೆ. ಇದು ತಮ್ಮ ನಾಲ್ಕನೇ ಚಲನ ಚಿತ್ರವೆಂದು ವೆಂಕಟ್ ಮಾಹಿತಿ ನೀಡಿದರು.
ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕುವ ಆಸೆ ಇದೆಯಾದರು ಪ್ರಸ್ತುತ ಅದನ್ನು ಮಾಡುವುದಿಲ್ಲ ಮತ್ತು ಇತರೆ ಯಾವುದೇ ಪಕ್ಷಗಳನ್ನು ಬೆಂಬಲಿಸುವುದಿಲ್ಲ. ಆಯಾ ವ್ಯಕ್ತಿಯ ವ್ಯಕ್ತಿತ್ವವನ್ನು ಗಮನಿಸಿ ವೈಯಕ್ತಿಕ ನೆಲೆಯಲ್ಲಷ್ಟೆ ಬೆಂಬಲಿಸುವುದಾಗಿ ವೆಂಕಟ್ ಸ್ಪಷ್ಟಪಡಿಸಿದರು.