ಹಲವಾರು ದಿನಗಳಿಂದ ತುಳುನಾಡಿನ ನರನಾಡಿಗಳಲ್ಲಿ ನಿರೀಕ್ಷೆಯ ಕಾವೇರಿಸಿದ, ಮೊಟ್ಟ ಮೊದಲ ಮಹಿಳಾ ನಿರ್ದೇಶಕಿಯ ಚಿತ್ರ “ನಮ್ಮ ಕುಡ್ಲ” ಯುಗಾದಿಯ ದಿನದಂದು ಬಿಡುಗಡೆಯಾಗಿ ಚಿತ್ರರಂಗದ ಪಾಲಿಗೆ ಬೆಲ್ಲದ ಸಿಹಿಯನ್ನು ಉಣಿಸಿದೆ. ಅಮನ್ ಪ್ರೊಡಕ್ಷನ್ಸ್ ಮತ್ತು ಖುಷಿ ಫಿಲಂಸ್ ರವರು ಜಂಟಿಯಾಗಿ ನಿರ್ಮಿಸಿರುವ “ನಮ್ಮ ಕುಡ್ಲ” ಗೆಲುವಿನ ನಗೆಯನ್ನು ಬೀರಿದೆ.
ಜಾಹೀರಾತು ಕ್ಷೇತ್ರದಲ್ಲಿ ಅನುಭವವಿರುವ ಅಶ್ವಿನಿ ಹರೀಶ್ ನಾಯಕ್ ನಿರ್ದೇಶನವಿರುವ ಚಿತ್ರ ನೋಡಿದ ಪ್ರೇಕ್ಷಕ ಚಿತ್ರತಂಡದ ಬೆನ್ನು ತಟ್ಟಿ ಶಹಬ್ಬಾಸ್ ಅನ್ನುತ್ತಿದ್ದಾನೆ. ಮೊದಲ ಸಿನೆಮಾ ನಿರ್ದೇಶನವಾದ್ದರಿಂದ ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ತಪ್ಪುಗಳು ಸಹಜವಾಗಿ ಕಾಣುತ್ತವೆ. ಕೆಲವೊಂದು ಹಾಸ್ಯಪಾತ್ರಗಳು ಸ್ವಲ್ಪ ಕಿರಿಕಿರಿಯೆನಿಸುತ್ತವೆ. ನಾಯಕ ಪ್ರಕಾಶ್ ಶೆಟ್ಟಿ ಪಕ್ಕಾ ಮಾಸ್ ಲುಕ್ ಇರುವ ಭರವಸೆಯ ನಟನಾಗಿ ಕಾಣುತ್ತಾರೆ. ನಾಯಕಿ ಅಶ್ವಿನಿ ಬಜಾರಿ ಹುಡುಗಿಯಾಗಿ ಪ್ರೇಕ್ಷಕನ ಮನ ಗೆಲ್ಲುತ್ತಾರೆ. ಉಳಿದಂತೆ ಪೋಲಿಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ನಿರ್ಮಾಪಕ ಅಸ್ಲಾಂ ಪಾಶಾ ಸೂಪರ್. ಗೋಪಿನಾಥ್ ಭಟ್, ಸಂತೋಷ್ ಶೆಟ್ಟಿ ತಮ್ಮ ಎಂದಿನ ಶೈಲಿಯಲ್ಲಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ದಿನೇಶ್ ಅತ್ತಾವರ ಅವರು ವಿಶೇಷವಾದ ಮತ್ತು ವಿಭಿನ್ನವಾದ ಪಾತ್ರದಲ್ಲಿ ಜನಮೆಚ್ಚುಗೆ ಗಳಿಸುತ್ತಾರೆ. ಸತೀಶ್ ಬಂದಲೆ, ಪ್ರಸನ್ನ ಶೆಟ್ಟಿ ಬೈಲೂರು, ಸುನಿಲ್ ನೆಲ್ಲಿಗುಡ್ಡೆ ಕಾಮಿಡಿಯಲ್ಲಿ ಚಿತ್ರದುದ್ದಕ್ಕೂ ಶಿಳ್ಳೆ ಗಿಟ್ಟಿಸುತ್ತಾರೆ.
ತಾಂತ್ರಿಕ ವರ್ಗದಲ್ಲಿ ಬಸವರಾಜ್ ಹಾಸನ್ ಅವರ ಕ್ಯಾಮೆರಾ, ಹರೀಶ್ ನಾಯಕ್ ಅವರ ಸಂಕಲನ, ಹಿನ್ನೆಲೆ ಸಂಗೀತ ವ್ಹಾವ್ ಎನ್ನುವಷ್ಟು ಅದ್ಭುತವಾಗಿದೆ. ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು ಬರೆದ “ಉತ್ತರ ಕೊರ್ಪನಾ” ಹಾಡು ಪ್ರೇಮಿಗಳ ಪಾಲಿಗೆ ಯುಗಾದಿ ಗಿಫ್ಟ್ ನಂತೆ ಪರಿಣಮಿಸುತ್ತದೆ. ಗುರುರಾಜ್ ಅವರ ಸಂಗೀತ ಇಂಪಾಗಿದೆ. ಅಲ್ಲಲ್ಲಿ ಕಾಣುವ ಸಣ್ಣಪುಟ್ಟ ತಪ್ಪುಗಳನ್ನು ಮನ್ನಿಸಿ ಚಿತ್ರ ನೋಡಿದರೆ, ಒಂದು ಅದ್ಭುತವಾದ ಚಿತ್ರ ನೋಡಿದ ಅನುಭವ ನಿಮ್ಮದಾಗುತ್ತದೆ.