“ನಮ್ ಏರಿಯಾಲ್ ಒಂದಿನ” ಮತ್ತು “ತುಘ್ಲಕ್” ಸಿನೆಮಾಗಳಲ್ಲಿ ಅವತ್ತೇ something different ಟ್ರೈ ಮಾಡಿದ್ದ ನಿರ್ದೇಶಕ ಅರವಿಂದ್ ಕೌಶಿಕ್ ನಂತರ “ನಮ್ ಏರಿಯಾಲ್ ಇನ್ನೊಂದಿನ” ಚಿತ್ರವನ್ನು ಎರಡು ಗಂಟೆಯಲ್ಲಿ ಚಿತ್ರಿಸಿ ರೆಕಾರ್ಡ್ ಕ್ರಿಯೇಟ್ ಮಾಡಿದ್ದರು. ಆಮೇಲೆ ಸ್ವಲ್ಪ ಗ್ಯಾಪಲ್ಲಿ ಮರೆಯಾಗಿದ್ದ ಕೌಶಿಕ್ ಅವರು ಈಗ ಸಡನ್ನಾಗಿ ಎದ್ದು “ಹುಲಿರಾಯ” ನಾಗಿ ಘರ್ಜಿಸತೊಡಗಿದ್ದಾರೆ. ಬಾಲಿವುಡ್ಡಿನ ಅನುರಾಗ್ ಕಶ್ಯಪ್ ರನ್ನು ಹೋಲುವ ಅರವಿಂದ್ ಅವರು ತಾವು ಮಾಡಿರುವ ಸಿನೆಮಾಗಳಲ್ಲೂ ಅವರಂತೆ ಸೌಂಡ್ ಮಾಡತೊಡಗಿದ್ದಾರೆ.
ಕಡ್ಡಿಪುಡಿ ಚಿತ್ರ ನೋಡಿರುವ ಎಂಟೆದೆ ಭಂಟರ ಎದೆಯಲ್ಲೂ ಲೈಟಾಗಿ ನಡುಕ ಹುಟ್ಟಿಸಿದ ನರಪೇತಲ, ಲೋಕಲ್ ರೌಡಿ ರೆಕ್ಕೆ ವೆಂಕಟೇಶ ಯಾನೆ ಬಾಲು ನಾಗೇಂದ್ರ ರಂಗಭೂಮಿಯ ಹಿನ್ನೆಲೆಯಿಂದ ಬಂದು ಸಿನೆಮಾಗಳಲ್ಲಿ ತಮಗೆ ಸಿಕ್ಕ ಸಣ್ಣಪುಟ್ಟ ಪಾತ್ರಗಳಲ್ಲಿ ತಮ್ಮ ಖದರ್ ತೋರಿಸಿದವರು. ಈಗ ವಿಭಿನ್ನವಾದ ಪಾತ್ರದಲ್ಲಿ ಪೂರ್ಣಪ್ರಮಾಣದ ನಾಯಕನಾಗಿ “ಹುಲಿರಾಯ” ಚಿತ್ರದಲ್ಲಿ ಕನ್ನಡ ಭಾಷೆ ಮಾತಾಡದವರಿಗೆ ಕಡಕ್ಕಾಗೇ ಆವಾಜ್ ಹಾಕಲು ರೆಡಿಯಾಗಿದ್ದಾರೆ.
“ಹುಲಿರಾಯ”ನ ಅಬ್ಬರವನ್ನು ರವಿವರ್ಮ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರೆ, ಅರ್ಜುನ್ ರಾಮ್ ಸಂಗೀತ, ಸಂತೋಷ್ ರಾಧಾಕೃಷ್ಣನ್ ಗ್ರಾಫಿಕ್ಸ್ ಮತ್ತು ಹರಿಚರಣ್ ಅವರು ಡಬ್ಬಿಂಗ್ ನಲ್ಲಿ ಕೈ ಜೋಡಿಸಿದ್ದಾರೆ. ಯೂಟ್ಯೂಬ್, ಫೇಸ್ ಬುಕ್ಕಿನಲ್ಲಿ ದಿನೇ ದಿನೇ ಸೌಂಡ್ ಮಾಡುತ್ತಿರುವ ಹುಲಿರಾಯನಿಗೆ ನೆರೆರಾಜ್ಯದಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ನೋಡುಗರ ನಿರೀಕ್ಷೆಯನ್ನು ಇಮ್ಮಡಿಗೊಳಿಸಿರುವ ಹುಲಿರಾಯ ಆದಷ್ಟು ಬೇಗ ಬೆಳ್ಳಿಪರದೆಯಲ್ಲಿ ಅಬ್ಬರಿಸಲಿ, ಅರವಿಂದ್ ಕೌಶಿಕ್ ಅವರ ಕ್ರಿಯಾಶೀಲತೆಗೆ ರಾಷ್ಟ್ರಮಟ್ಟದಲ್ಲಿ ಗೌರವ ದೊರೆಯುವಂತಾಗಲಿ ಎಂಬುದು ನ್ಯೂಸ್ ಕನ್ನಡದ ಆಶಯ.