ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ದೇಶಕ, ನಟ ಪಿ. ಎನ್ ಸತ್ಯ ಅವರು ಶನಿವಾರ ಸಂಜೆ ಸುಮಾರು 7.30ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸತ್ಯ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಬನಿ ಮಿಡಿದಿದ್ದಾರೆ.
ಕಳೆದ ಒಂದು ವರ್ಷದಿಂದ ಸತ್ಯ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಇಂದು ಸೋದರಿ ಮನೆಯಲ್ಲಿ ಸತ್ಯ ಅಂತಮ ದರ್ಶನ ನಡೆಯಲಿದೆ. ಸತ್ಯ ನಿರ್ದೇಶನದ ಮೆಜೆಸ್ಟಿಕ್ ಸಿನಿಮಾ ದರ್ಶನ್ ಗೆ ಸ್ಯಾಂಡಲ್ ವುಡ್ ನಲ್ಲಿ ಹೊಸ ಇಮೇಜ್ ತಂದು ಕೊಟ್ಟಿತ್ತು. ಸತ್ಯ ಆ ಬಳಿಕ ಡಾನ್, ದಾಸ, ಶಾಸ್ತ್ರಿ, ಗೂಳಿ ಸೇರಿದಮತೆ ಸುಮಾರು 16 ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.
ಸತ್ಯ ಸಾವಿಗೆ ದರ್ಶನ್ ಕಂಬನಿ ಮಿಡಿದಿದ್ದು ‘ನನ್ನ ಆಪ್ತ ಸ್ನೇಹಿತರಲ್ಲೊಬ್ಬರು, ನನ್ನ ‘ಮೆಜೆಸ್ಟಿಕ್’ ಚಿತ್ರದ ನಿರ್ದೇಶಕರು ಪಿ.ಎನ್ ಸತ್ಯ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಸತ್ಯ ರವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಟ್ವೀಟ್ ಮಾಡಿದ್ದಾರೆ.