ಆನೇಕಲ್: ಬಾರ್ನಲ್ಲಿ ಗುರಾಯಿಸಿ ನೋಡಿದ ಎಂಬ ಕಾರಣಕ್ಕೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು, ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿರುವ ಘಟನೆ ಆನೆಕಲ್ ತಾಲೂಕಿನ ಕಲ್ಕೆರೆಯ ಎಸ್.ಕೆ.ಆರ್ ಬಾರ್ನಲ್ಲಿ ನಡೆದಿದೆ.
ಹರ್ಷವರ್ಧನ್ (34) ಕೊಲೆಯಾದ ವ್ಯಕ್ತಿ. ಬನ್ನೇರುಘಟ್ಟ ಸಮೀಪದ ಸಿಕೆ ಪಾಳ್ಯದಲ್ಲಿ ವಾಸವಿದ್ದ ಹರ್ಷವರ್ಧನ್, ಗುಲ್ಬರ್ಗಾ ಮೂಲದವರಾಗಿದ್ದು, ಕೆಲ ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದರು. ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದರು.
ನಿನ್ನೆ ಸಂಜೆ ಕೆಲಸ ಮುಗಿಸಿ ಶಾಲೆಯಿಂದ ನೇರ ಕಲ್ಕೆರೆಯ ಎಸ್.ಕೆ.ಆರ್ ಬಾರ್ ಕಡೆ ಹೋಗಿದ್ದರು. ಅಲ್ಲಿ ಮದ್ಯ ಸೇವಿಸುವ ವೇಳೆ ಪಕ್ಕದ ಟೇಬಲ್ನಲ್ಲಿ ಕುಳಿತಿದ್ದ ಮತ್ತಿಬ್ಬರು ಆಸಾಮಿಗಳ ಕೂಗಾಟದಿಂದ ಬೇಸತ್ತು ಆಕ್ಷೇಪಿಸುವಂತೆ ಅವರತ್ತ ನೋಡಿದ್ದರು. ʼಏನೋ ಗುರಾಯಿಸ್ತೀಯಾ?ʼ ಎಂದು ಜಗಳ ತೆಗೆದ ಪುಂಡರು ಬಿಯರ್ ಬಾಟಲಿಯಿಂದ ಹರ್ಷವರ್ಧನ್ ತಲೆಗೆ ಹೊಡೆದಿದ್ದಲ್ಲದೆ, ಬಳಿಕ ಚಾಕು ಮತ್ತೆ ಬಿಯರ್ ಬಾಟಲಿಯಿಂದ ಹೊಟ್ಟೆ ಭಾಗಕ್ಕೆ ಚುಚ್ಚಿದ್ದಾರೆ. ಹರ್ಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಬಾರ್ನ ಸಿಸಿಟಿವಿಯಲ್ಲಿ ಕೊಲೆಗಾರರ ಕೃತ್ಯ ದಾಖಲಾಗಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.