ಉಜಿರೆ: ಎನ್ಸಿಸಿ ದಿನಾಚರಣೆಯ ಪ್ರಯುಕ್ತ ಎಸ್ ಡಿ ಎಂ ಪದವಿ ಕಾಲೇಜಿನ ಆವರಣದಲ್ಲಿ ಯುದ್ಧದ ವೇಳೆ ಸೈನಿಕರು ನಡೆಸುವ ಕಾರ್ಯಾಚರಣೆಯ ಬಹಿರಂಗ ಅಣಕು ಪ್ರದರ್ಶನ ನಡೆಸಲಾಯಿತು.
ಕಾಲೇಜಿನ ಎನ್ಸಿಸಿ ಕೆಡೆಟ್ಗಳು ಮೂರು ತಂಡಗಳನ್ನು ರಚಿಸಿಕೊಂಡು ಯುದ್ಧತಂತ್ರಗಳ ಪ್ರದರ್ಶನ ಮತ್ತು ಯುದ್ಧ ಭೂಮಿಯಲ್ಲಿ ಸೈನಿಕರು ಎದುರಿಸುವ ಸವಾಲುಗಳನ್ನು ಪ್ರದರ್ಶಿಸಿದರು.
ಕರ್ನಲ್ ನಿತಿನ್ ಭಿಡೆಯವರ ನೇತ್ರತ್ವದಲ್ಲಿ ಕಳೆದ ಮೂರು ದಿನಗಳಿಂದ ಎನ್ಸಿಸಿ ಕೆಡೆಟ್ ತಾಲೀಮು ನಡೆಸಿದ್ದರು. ಎನ್ಸಿಸಿಯ ಸೀನಿಯರ್ ಅಂಡರ್ ಅಧಿಕಾರಿಗಳಾದ ಪ್ರವರ್ಧನ್ ಜೈನ್, ತೇಜಸ್ವಿನಿಯವರ ನಾಯಕತ್ವದಲ್ಲಿ ಕೆಡೆಟ್ಗಳು ಸ್ವತಃ ಬಿದಿರು ಮುಂತಾದವುಗಳನ್ನು ಬಳಸಿಕೊಂಡು ನಕಲಿ ಶಸ್ತ್ರಾಸ್ತ್ರಗಳನ್ನು ತಯಾರಿಸಿಕೊಂಡು ಉತ್ಸಾಹದಿಂದ ಪ್ರದರ್ಶನದಲ್ಲಿ ಭಾಗಿಯಾದರು.
ಸಾಮಾನ್ಯವಾಗಿ ಪ್ರಜೆಗಳಿಗೆ ಯುದ್ಧಭೂಮಿಯಲ್ಲಿ ಹೇಗೆ ಕಾರ್ಯಾಚರಣೆ ನಡೆಯುತ್ತದೆ ಎನ್ನುವುದು ತಿಳಿದಿರುವುದಿಲ್ಲ. ಸಿನಿಮಾಗಳಿಂದ ಅವರು ಪ್ರೇರಿತರಾಗಿ ಅದನ್ನೇ ಸತ್ಯ ಎಂದು ಭಾವಿಸಿರುತ್ತಾರೆ. ಈ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸೈನಿಕ ಕಾರ್ಯಾಚರಣೆಯ ಅಣಕು ಪ್ರದರ್ಶನವನ್ನು ಇಲ್ಲಿ ಏರ್ಪಡಿಸಲಾಯಿತು ಎಂದು ಸೀನಿಯರ್ ಅಂಡರ್ ಆಫೀಸರ್ ಪ್ರವರ್ಧನ್ ಜೈನ್ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ ಎನ್ ಉದಯ ಚಂದ್ರ, ಕರ್ನಲ್ ನಿತಿನ್ ಭಿಡೆ, ಲೆಫ್ಟಿನೆಂಟ್ ಭಾನು ಪ್ರಕಾಶ್, ಲೆಫ್ಟಿನೆಂಟ್ ಶೋಭಾರಾಣಿ, ಸುಬೇದಾರ್ ಸಂದೀಪ್, ಹವಾಲ್ದಾರ್ ಗೋಪಕುಮಾರ್ ಸೇರಿದಂತೆ ಎಲ್ಲಾಬ ಎನ್ಸಿಸಿ ಕೆಡೆಟ್ಗಳು ಮತ್ತು ಕಾಲೇಜಿನ ಶಿಕ್ಷಕ ಸಮೂಹ ಮತ್ತು ವಿದ್ಯಾರ್ಥಿಗಳು ಇದ್ದರು.