ಉಜಿರೆ: ಅರ್ಥಶಾಸ್ತ್ರ ಅವಕಾಶಗಳ ಆಗರ. ವಿದ್ಯಾಭ್ಯಾಸದ ಸಮಯದಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜ್ಞಾನ ಹಾಗೂ ಕೌಶಲವರ್ಧನೆ ಸಾಧ್ಯ. ನಾವು ಭಾರತ ದೇಶದ ನಾಗರಿಕರಾಗಿ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಬೇಕು ಎಂದು ಶ್ರೀ ಧ. ಮ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಎಮ್.ವೈ ಕರೆ ನೀಡಿದರು.
ಹರೀಶ್ ಎಮ್.ವೈ ಅವರು ಇತ್ತೀಚೆಗೆ ಉಜಿರೆಯ ಶ್ರೀ ಧ.ಮ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ “ಅರ್ಥಶಾಸ್ತ್ರ ಸಂಘ” ದ ನೂತನ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಯಕುಮಾರ್ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ತರಗತಿಯ ನಾಲ್ಕು ಗೋಡೆಯೊಳಗೆ ಕೂತು ಕಲಿಯುವುದು ಸಾಲದು. ಮಾರುಕಟ್ಟೆ ಸೃಷ್ಟಿಸುವ ಅವಕಾಶಗಳನ್ನು ಬಳಸಿಕೊಳ್ಳಲು ಸಮಕಾಲೀನ ಕೌಶಲಗಳ ಅಭಿವೃದ್ಧಿಗೆ ಮಹತ್ವ ನೀಡಬೇಕು. ವಿದ್ಯಾರ್ಥಿಗಳಾಗಿ ನಾವು ಯಾವಾಗಲೂ ನಮ್ಮ ತಂದೆ ತಾಯಿಯ ಹಾಗೂ ದೇಶದ ಆಸ್ಥಿಯಾಗಿರಬೇಕೆ ಹೊರತು ಅವರ ಹೊರೆಯಾಗಿರ ಬಾರದು ಎಂದು ಹೇಳಿದರು.
ತೃತೀಯ ಪದವಿ ವಿದ್ಯಾರ್ಥಿಗಳು ರೂಪಿಸಿದ “ಅರ್ಥಪ್ರಭ” ಭಿತ್ತಿ ಪತ್ರಿಕೆಯನ್ನು ಈ ಸಂದರ್ಭದಲ್ಲಿಅತಿಥಿಗಳು ಹಾಗೂ ವಿದ್ಯಾರ್ಥಿ
ನಾಯಕರು ಅನಾವರಣಗೊಳಿಸಿದರು. ವಿಭಾಗದ ಪ್ರಾಧ್ಯಾಪಕರಾದ ಡಾ. ಗಣರಾಜ್ ಕೆ, ಡಾ. ಮಹೇಶ್ ಶೆಟ್ಟಿ, ಅಭಿನಂದನ್ ಜೈನ್ ಹಾಗೂ ವಿದ್ಯಾರ್ಥಿ ಸಂಯೋಜಕರಾದ ಸಿಂಧೂ ಹೆಗಡೆ ಮತ್ತು ಶ್ರವಣ್ ಉಪಾಧ್ಯಾಯ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನುಷಾ ಜಿ ಶೆಟ್ಟಿಯವರು ಅತಿಥಿಗಳ ಕಿರುಪರಿಚಯಗಳನ್ನು ನೀಡಿದರು, ಪೂರ್ವಿತ ಸ್ವಾಗತಿಸಿ, ಅನ್ನಪೂರ್ಣ ವಂದಿಸಿದರು .