ಉಜಿರೆ: ಸಕಾರಾತ್ಮಕ ಚಿಂತನೆಗಳ ಮೂಲಕ ಸಂತೋಷದಾಯಕ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಮನಃಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಆಡ್ರೆ ಪಿಂಟೋ ಹೇಳಿದರು.
ಅವರು ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್ನಲ್ಲಿ ಮನಃಶಾಸ್ತ್ರ ವಿಭಾಗವು ಸೋಮವಾರ ಆಯೋಜಿಸಿದ್ದ ನ್ಯಾಶನಲ್ ಹೈಬ್ರೀಡ್ ಎಜ್ಯು-ಕಲ್ಚರಲ್ ಕಾರ್ನಿವಲ್ ‘ಸೈಕೋವಿಶನ್ 2022’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸೋಲನ್ನು ಅನುಭವಿಸಿದಾಗ ಕುಗ್ಗದೇ ಅದರಿಂದ ಪಾಠ ಕಲಿತು ಮುಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಲಭಿಸುತ್ತದೆ. ಸಂತೋಷವಾಗಿರಲು ಕಾರಣಗಳನ್ನು ಹುಡುಕದೇ ಇರುವುದರಲ್ಲಿ ಸಂತಸಪಡಬೇಕು ಎಂದರು.
ಇನ್ನೊಬ್ಬರಿಂದ ತಪ್ಪುಗಳಾದಾಗ ಅವರನ್ನು ಕ್ಷಮಿಸುವ ಉದಾರ ಮನಸ್ಸಿರಬೇಕು. ತಪ್ಪುಗಳಿಂದ ವೈಮನಸ್ಸನ್ನು ಮರೆಯುವ ಸ್ವಭಾವವಿರಬೇಕು. ಹಾಗಾದಾಗ ಮಾತ್ರ ವ್ಯಕ್ತಿತ್ವ ಅರ್ಥಪೂರ್ಣಗೊಳ್ಳುತ್ತದೆ ಎಂದು ಹೇಳಿದರು. ನಮ್ಮ ನಡೆ-ನುಡಿಗಳು ಸಾಮಾಜಿಕವಾಗಿ ಉತ್ತಮವಾಗಿದ್ದಾಗ ಮಾತ್ರ ಜೀವನವೂ ಅರ್ಥಪೂರ್ಣವಾಗಿರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ವಿಶ್ವನಾಥ ಪಿ. ಮಾತನಾಡಿದರು. ಸ್ಪರ್ಧೆಗಳು ನಮ್ಮಲ್ಲಿನ ಕೌಶಲ್ಯವನ್ನು ವೃದ್ಧಿಗೊಳಿಸುತ್ತದೆ. ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲುವುದು ಮುಖ್ಯವಲ್ಲ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.
ವಿಭಾಗದ ಮುಖ್ಯಸ್ಥರಾದ ಡಾ.ವಂದನಾ ಜೈನ್ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ಸಂಜಿತಾ ಅಜಿತ್ಕುಮಾರ್ ನಿರೂಪಿಸಿದರು. ವಿನಂತಿ ಹೆಗ್ಡೆ ವಂದಿಸಿದರು.