ಉಜಿರೆ: ಎಸ್.ಡಿ.ಎಂ ಸಂಸ್ಥೆಯು ಶಿಕ್ಷಣಕ್ಕೆ ಪ್ರಾಯೋಗಿಕ ಸ್ಪರ್ಶ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಎನ್.ಇ.ಪಿ ಮೂಲಕ ಪ್ರಯೋಗಶೀಲ ಹೆಜ್ಜೆಯನ್ನು ಇಟ್ಟಿದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಹೇಳಿದರು.
ಅವರು ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಎಸ್ಡಿಎಂ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಅಧ್ಯಾಪಕರ ‘ವನಶ್ರೀ’ ಸಂಘದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ, ಸಸ್ಯಶಾಸ್ತ್ರದ ಎನ್.ಇ.ಪಿ ಪಠ್ಯಕ್ರಮದ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಜ್ಞಾನ, ಕೌಶಲ್ಯ ಮತ್ತು ಮನೋಧರ್ಮ ಈ ಮೂರನ್ನೂ ಒಳಗೊಂಡ ಸಂಯೋಜಿತ ವ್ಯವಸ್ಥೆಯೇ ಎನ್.ಇ.ಪಿ. ಆದ್ದರಿಂದ ಪಠ್ಯದ
ಜೊತೆಗೆ ಪ್ರಾಯೋಗಿಕ ಚಟುವಟಿಕೆಗಳನ್ನು ಅಳವಡಿಸಿಕೊಂಡರೆ, ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ತಲುಪುತ್ತದೆ ಎಂದು
ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅತಿಥಿ ಮಂಗಳೂರಿನ ಜಿ.ಎಫ್.ಜಿ ಕಾಲೇಜಿನ ಪ್ರಾಂಶುಪಾಲರಾದ ಜಯಕರ ಭಂಡಾರಿ ಮಾತನಾಡಿದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ಹೋದಾಗ, ನಾವು ಕಲಿತ ಪದವಿಯನ್ನು ಹೆಚ್ಚಾಗಿ ಪರಿಗಣಿವುದಿಲ್ಲ. ಬದಲಾಗಿ ಅದಕ್ಕೆ ಪೂರಕವಾದ ಒಂದು ವರ್ಷದ ಪ್ರಾಯೋಗಿಕ ಕೋರ್ಸ್ ಪೂರೈಸಬೇಕಾಗುತ್ತದೆ. ಇದೇ ನೆಲೆಯಲ್ಲಿ ಎನ್.ಇ.ಪಿ ಪರಿಕಲ್ಪನೆ ರೂಪುಗೊಂಡಿದೆ ಎಂದರು.
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಪಿ.ಎನ್. ಉದಯಚಂದ್ರ ಮಾತನಾಡಿ, ಶಿಕ್ಷಣದಲ್ಲಿ ಯಾವುದೇ ಪಠ್ಯ ಮತ್ತು ಪ್ರಾಯೋಗಿಕ ಅಭ್ಯಾಸಗಳನ್ನು ಅಳವಡಿಸಿಕೊಂಡರೂ, ಅದರ ಹೊರತಾದ ಓದುಗಳೂ ವಿದ್ಯಾರ್ಥಿಗಳಿಗೆ ಅಷ್ಟೇ ಮುಖ್ಯವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರಿನ ಜಿ.ಎಫ್.ಜಿ ಕಾಲೇಜಿನ ಪ್ರಾಂಶುಪಾಲರಾದ ಜಯಕರ ಭಂಡಾರಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ.ಎನ್. ಉದಯಚಂದ್ರ ಮಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಅಧ್ಯಾಪಕರ ಸಂಘ ‘ವನಶ್ರೀ’ ಅಧ್ಯಕ್ಷ, ಎಸ್.ಡಿ.ಎಂ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕುಮಾರ್ ಹೆಗ್ಡೆ ಬಿ.ಎ ಉಪಸ್ಥಿತರಿದ್ದರು.
ಡಾ. ಗಣೇಶ್ ವಿ. ಶಿಂಧೆ ಕಾರ್ಯಕ್ರಮ ನಿರೂಪಿಸಿದರು. ಪ್ರಾಸ್ತಾವಿಕವಾಗಿ ಡಾ. ಕುಮಾರ್ ಹೆಗ್ಡೆ ಮಾತನಾಡಿದರು. ‘ವನಶ್ರೀ’ ಕಾರ್ಯದರ್ಶಿ ವಿನಾಯಕ್ ವಂದಿಸಿದರು.