ರಾಮನಗರ: ಭೌಗೋಳಿಕವಾಗಿ ಪ್ರಾಕೃತಿಕ ಸಂಪತ್ಭರಿತವಾದ ರಾಮನಗರ ಜಿಲ್ಲೆಯನ್ನು ಪ್ರಮುಖ ಪ್ರವಾಸಿ ತಾಣವಾಗಿ ರೂಪಿಸುವಂತೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವಥ ನಾರಾಯಣ ಅವರು ಪ್ರವಾಸೋದ್ಯಮ ಸಚಿವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ರಾಜ್ಯ ಪ್ರವಾಸೋಧ್ಯಮ ಸಚಿವ ಆನಂದ್ಸಿಂಗ್ ಅವರಿಗೆ ಪತ್ರ ಬರೆದಿರುವ ಸಚಿವ ಅಶ್ವಥನಾರಾಯಣ ಅವರು, ರಾಮನಗರ ಜಿಲ್ಲೆಯ ಮುತ್ತತ್ತಿ, ಸಂಗಮ, ಮೇಕೆದಾಟುಗಳಂತಹ ನದಿತೀರದ ಪ್ರದೇಶಗಳು, ಸಾವನದುರ್ಗ, ರಾಮದೇವರ ಬೆಟ್ಟ ಪ್ರವಾಸಿ ತಾಣಗಳು ಹಾಗೂ ಅರಣ್ಯ ಪ್ರದೇಶಗಳಿಂದ ಕೂಡಿದೆ. ಅಲ್ಲದೆ ಜಿಲ್ಲೆಯಲ್ಲಿ ಕಾವೇರಿ, ಶಿಂಷಾ, ಅರ್ಕಾವತಿ ಸೇರಿದಂತೆ ಅನೇಕ ನದಿಗಳು ಹರಿಯುತ್ತಿದ್ದು ಸಂಪತ್ಭರಿತವಾದ ವನ್ಯ ಸಂಪತ್ತಿನಿಂದ ಕಂಗೊಳಿಸುತ್ತಿದೆ. ಕಣ್ವ, ಇಗ್ಗಲೂರು, ಮಂಜನಬೆಲೆ, ತಿಪ್ಪಗೊಂಡನಹಳ್ಳಿಗಳಂತಹ ಜಲಾಶಯಗಳು ಕೂಡ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದ್ದು ಜಿಲ್ಲೆಯನ್ನು ಪ್ರವಾಸಿ ತಾಣವನ್ನಾಗಿಸುವಂತೆ ಕ್ರಮಕೈಗೊಳ್ಳಬೇಕೆಂದು ಕೋರಿದ್ದಾರೆ.
ರಾಜಧಾನಿ ಬೆಂಗಳೂರಿಗೆ ಅತೀ ಸಮೀಪ ಇರುವ ರಾಮನಗರ ಜಿಲ್ಲೆ ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು ಒಂದು ಗಂಟೆ ಅವಧಿಯ ಪ್ರಯಾಣದ ಅಂತರದಲ್ಲಿದೆ. ಜಿಲ್ಲೆಯಲ್ಲಿರುವ ಹಲವು ಪ್ರವಾಸಿತಾಣಗಳನ್ನು ಒಂದು ಯೂನಿಟ್ನಂತೆ ರೂಪಿಸಿ ಒಂದು ದಿನದ ಕಿರು ಪ್ರವಾಸವನ್ನು ಹಮ್ಮಿಕೊಳ್ಳಲು ರಾಮನಗರವು ಹೇಳಿ ಮಾಡಿಸಿದಂತಹ ಜಿಲ್ಲೆಯಾಗಿದೆ. ಪ್ರವಾಸೋದ್ಯಮದಲ್ಲಿ ವಿಫಲ ಅವಕಾಶಗಳಿಗೆ ಈ ಜಿಲ್ಲೆ ಎಡೆಮಾಡಿಕೊಡಲಿದೆ ಹೀಗಾಗಿ ಜಿಲ್ಲೆಯನ್ನು ಪ್ರವಾಸಿ ಕೇಂದ್ರವನ್ನಾಗಿ ರೂಪಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದ್ದಾರೆ.
ರಾಮನಗರ ಜಿಲ್ಲೆಗೆ ಸಂಬಂಧಿಸಿದಂತೆ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ತೆರೆದಿಡಲು ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ವಿವಿಧ ಭಾಗಿದಾರರನ್ನು ಒಳಗೊಂಡ “ಪ್ರವಾಸೋದ್ಯಮ ಸಮಾವೇಶ” ವೊಂದನ್ನು ಜುಲೈ 29 ರಂದು ಆಯೋಜಿಸುವಂತೆ ಸಚಿವ ಅಶ್ವಥ ನಾರಾಯಣ ಅವರು ಪ್ರವಾಸೋಧ್ಯಮ ಸಚಿವ ಆನಂದ್ಸಿಂಗ್ ಅವರಿಗೆ ಸಲಹೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯನ್ನು ಪ್ರವಾಸಿ ಕೇಂದ್ರವನ್ನಾಗಿಸುವ ಕುರಿತು ಕೂಲಂಕುಷವಾಗಿ ಚರ್ಚಿಸಲಾಯಿತು. ರಾಮನಗರ ಜಿಲ್ಲೆಗೆ ಬರುವಂತಹ ಪ್ರವಾಸಿಗರನ್ನು ಸೆಳೆಯಲು ಸೈಕಲ್ ಸವಾರಿ ಹಲವು ಸೌಲಭ್ಯ ಕಲ್ಪಿಸಿಕೊಡುವ ಜೊತೆಗೆ ವಿವಿಧ ಚಟುವಟಿಕೆ, ಗುಡ್ಡಗಾಡು ಪ್ರದೇಶದಲ್ಲಿ ಬೈಕಿಂಗ್, ಹಾಗೂ ಚಾರಣಗಳಿಗೆ ವ್ಯವಸ್ಥೆ ಮಾಡಬಹುದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಅದೇ ರೀತಿ ಜಿಲ್ಲೆಯು ಕಲೆಗೆ ಹೆಸರುವಾಸಿಯಾಗಿದ್ದು ಜಿಲ್ಲೆಯಲ್ಲಿ ಪಾರಂಪರಿಕ ವಸ್ತು ಸಂಗ್ರಹಾಲಯ, ಸಿದ್ದಪಡಿಸಲು ಕ್ರಮಕೈಗೊಳ್ಳುವಂತೆ ಜಿಲ್ಲೆಯಲ್ಲಿರುವ ವಿವಿಧ ಧಾರ್ಮಿಕ ಕೇಂದ್ರಗಳನ್ನು ಗುರುತಿಸಿ ಅಲ್ಲಿಗೂ ಪ್ರವಾಸ ಕೈಗೊಳ್ಳಲು ಅಭಿವೃದ್ಧಿಪಡಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.