ಉಜಿರೆ, ಮೇ.17: ನಿರಂತರ ಓದು ಮಾಧ್ಯಮ ವೃತ್ತಿಪರತೆಯ ಶಕ್ತಿಯನ್ನು ಹೆಚ್ಚಿಸುವಷ್ಟರ ಮಟ್ಟಿಗೆ ಪ್ರಖರವಾಗಿರುತ್ತದೆ ಎಂದು ಮಂಗಳೂರು ಆಕಾಶವಾಣಿಯ ನಿರೂಪಕಿ ಅಕ್ಷತಾ ರಾಜ್ ಪೆರ್ಲ ಹೇಳಿದರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ‘ಧ್ವನಿ ಮುದ್ರಣ ಮತ್ತು ಸಂಕಲನ ತಂತ್ರಗಳು’ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸಾಹಿತ್ಯ ಹಾಗೂ ಸಮೂಹ ಮಾಧ್ಯಮ ಒಂದಕ್ಕೊಂದು ಬೆಸೆದುಕೊಂಡಿದೆ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಓದಿನೊಂದಿಗೆ ಮಾಧ್ಯಮ ವೃತ್ತಿಪರರು ಗುರುತಿಸಿಕೊಳ್ಳಬೇಕು. ಮಾಧ್ಯಮ ರಂಗವನ್ನು ಪ್ರವೇಶಿಸಲು ಇಚ್ಛಿಸುವ ವಿದ್ಯಾರ್ಥಿಗಳು ಈ ಬಗೆಯ ಓದಿನಲ್ಲಿ ಶ್ರದ್ಧೆ ಇರಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಮಾಧ್ಯಮ ರಂಗದಲ್ಲಿ ವಿನೂತನ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದರು.
ಸಾಹಿತ್ಯದ ಕುರಿತು ಆಸಕ್ತಿ ಇದ್ದಾಗ ಓದುವ ಹವ್ಯಾಸ ರೂಢಿಯಾಗುತ್ತದೆ. ನಿರಂತರ ಓದುವಿಕೆ ಭಾಷಾ ಜ್ಞಾನವನ್ನು ವೃದ್ಧಿಸುತ್ತದೆ. ಸಾಹಿತ್ಯ ಹಾಗೂ ಓದಿನ ಕುರಿತ ಕುತೂಹಲವಿದ್ದರೆ ಮಾಧ್ಯಮ ವೃತ್ತಿ ನಿರೀಕ್ಷಿಸುವ ವಿವಿಧ ಕಾರ್ಯಗಳನ್ನು ಸರಾಗವಾಗಿ ನಿರ್ವಹಿಸಬಹುದು ಎಂದರು.
ಆಧುನಿಕ ಜಗತ್ತಿನಲ್ಲಿ ರೇಡಿಯೋ ಹೊಸ ರೂಪದೊಂದಿಗೆ ಜನಪ್ರಿಯಗೊಳ್ಳುತ್ತಿದೆ. ಕೌಶಲ್ಯವನ್ನು ವಿಭಿನ್ನವಾಗಿ ವ್ಯಕ್ತಪಡಿಸುವ ಸಾಮರ್ಥ್ಯವಿದ್ದರೆ ಅವಕಾಶಗಳು ನಮ್ಮನ್ನು ಅರಸಿಕೊಂಡು ಬರುತ್ತವೆ ಎಂದು ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗ್ಡೆ ಹೇಳಿದರು.
ಎಫ್.ಎಂ ರೇಡಿಯೋ ಹೊಸ ರೀತಿಯಲ್ಲಿ ಕೇಳುಗರನ್ನು ಆಕರ್ಷಿಸುವುದದೊಂದಿಗೆ ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತದೆ. ನಿರೂಪಣಾ ಕ್ಷೇತ್ರದಲ್ಲಿ ವಿಷಯ ಪ್ರಸ್ತಾವನೆಯ ಜೊತೆಗೆ ಮಾಹಿತಿ ಸಂಗ್ರಹ ಹಾಗೂ ಬರವಣಿಗೆಯ ಕೌಶಲ್ಯ ನಿರೂಪಕರಿಗಿರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಕಡಬ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಉಜಿರೆ ಎಸ್.ಡಿ.ಎಂ ಕಾಲೇಜಿನ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ಸಂಯೋಜಕ ವಿ.ಕೆ. ಕಡಬ ಅವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ಜಗದೀಶ್ ಬಳಂಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.