ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ 15ನೇ ವಾರ್ಷಿಕ ಘಟಿಕೋತ್ಸವವು ಜುಲೈ 5ರಂದು ವಿಶ್ವವಿದ್ಯಾನಿಲಯದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ನಡೆಯಲಿದ್ದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಿದೆ.
ಪ್ರವೀಣ್ ಗೋಡ್ಖಿಂಡಿ (ಸಂಗೀತ ಕ್ಷೇತ್ರ), ಡಾ. ರಾಮ್ ಶಂಕರ್ ಕುರೀಲ್ (ಕೃಷಿ ವಿಜ್ಞಾನ), ಶ್ರೀ ಶ್ರೀ ಯತಿರಾಜ ಜೀಯರ್ ಸ್ವಾಮೀಜಿ (ಸಮಾಜಸೇವೆ) ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಈ ಮೂರು ಸಾಧಕರಿಗೆ ತುಮಕೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ.
ಕರ್ನಾಟಕದ ಘನತೆವೆತ್ತ ರಾಜ್ಯಪಾಲರೂ ತುಮಕೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಸಿ. ಎನ್. ಅಶ್ವತ್ಥನಾರಾಯಣ, ಮಾನ್ಯ ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳ ಸಚಿವರು, ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಸಹಕುಲಾಧಿಪತಿಗಳು, ಇವರು ಉಪಸ್ಥಿತರಿರುವರು.
ಪ್ರೊ. ಸುಷ್ಮಾ ಯಾದವ್, ಸದಸ್ಯರು, ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ), ಹಾಗೂ ವಿಶ್ರಾಂತ ಸಹ ಕುಲಪತಿಗಳು, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ, ನವದೆಹಲಿ, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಘಟಿಕೋತ್ಸವ ಭಾಷಣ ಮಾಡಲಿರುವರು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ (ಪ್ರಭಾರ) ಪ್ರೊ. ಕೇಶವ ವಿಶ್ವವಿದ್ಯಾನಿಲಯದ ವಾರ್ಷಿಕ ವರದಿ ಮಂಡಿಸಲಿರುವರು.
ಈ ಬಾರಿಯ ಘಟಿಕೋತ್ಸವದಲ್ಲಿ ಒಟ್ಟು ಒಟ್ಟು 10,386 ಅಭ್ಯರ್ಥಿಗಳು ಪದವಿ ಸ್ವೀಕರಿಸಲು ಅರ್ಹರಾಗಿದ್ದಾರೆ. ಇವರಲ್ಲಿ 03 ಅಭ್ಯರ್ಥಿಗಳು ಡಿ.ಲಿಟ್ ಪದವಿ, 74 ಅಭ್ಯರ್ಥಿಗಳು ಪಿಎಚ್.ಡಿ. ಪದವಿ, 1,522 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 8,787 ಅಭ್ಯರ್ಥಿಗಳು ಸ್ನಾತಕ ಪದವಿಗೆ ಅರ್ಹರಾಗಿರುತ್ತಾರೆ. ವಿಶ್ವವಿದ್ಯಾನಿಲಯವು ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ್ಯಾಂಕ್ ಗಳನ್ನು (ಎಂಸಿಎ ಪದವಿ-03 ರ್ಯಾಂಕ್), ಬಿಎ/ಬಿಎಸ್ಸಿ/ಬಿಕಾಂ/ ಬಿಬಿಎಂ/ಬಿಇಡಿ/ಬಿಎಸ್ಡಬ್ಲ್ಯೂ (ಸೆಮಿಸ್ಟರ್ ಪದ್ಧತಿ)ಗಳಿಗೆ ತಲಾ ಹತ್ತು ರ್ಯಾಂಕ್ ಗಳನ್ನು, ಬಿಎಫ್ಎ-01 ರ್ಯಾಂಕ್, ಬಿ.ವೋಕ್. -03, ಹಾಗೂ ಬಿಎ ಇಂಟಗ್ರೇಟೆಡ್ ಕನ್ನಡ ಪಂಡಿತ್ಗೆ 01 ರ್ಯಾಂಕ್ ಘೋಷಿಸಿದೆ. ಒಟ್ಟು 72 ವಿದ್ಯಾರ್ಥಿಗಳಿಗೆ 96 ಚಿನ್ನದ ಪದಕಗಳನ್ನು ಹಾಗೂ ಆರು ನಗದು ಬಹುಮಾನಗಳನ್ನು ವಿಶ್ವವಿದ್ಯಾನಿಲಯವು ಈ ಬಾರಿಯ ಘಟಿಕೋತ್ಸವದಲ್ಲಿ ಪ್ರದಾನಮಾಡಲಿದೆ.