ಶಿವಮೊಗ್ಗ: ನಗರದ ಪ್ರತಿಷ್ಠಿತ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಕ್ರಿಷಾ ಫೌಂಡೇಷನ್ ನೀಡುವ ರಾಷ್ಟ್ರೀಯ ಯುವ ಯೋಧ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕು.ನಾಗವೇಣಿ ಎನ್. ಮತ್ತು ಸತ್ಯವತಿ ಬಿ., ಅವರೇ ಅವರೇ ಈ ಪ್ರಶಸ್ತಿಗೆ ಭಾಜನರಾಗಿದ್ದು ಬಿ.ಎ.ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕ್ರಿಷಾ ಫೌಂಡೇಷನ್ ಎನ್.ಎಸ್.ಎಸ್.ನಲ್ಲಿ ಸಾಧನೆ ಗೈದವರಿಗೆ ಸಂಸ್ಥಾಪನಾ ದಿನದ ಅಂಗವಾಗಿ ಈ ಪ್ರಶಸ್ತಿಯನ್ನು ನೀಡುತ್ತಿದ್ದು ಎನ್.ಎಸ್.ಎಸ್.ಸಂಸ್ಥಾಪನಾ ದಿನವಾದ ಸೆಪ್ಟೆಂಬರ್ 24ರಂದು ವರ್ಚುವಲ್ ಪ್ರೋಗ್ರಾಮ್ ಮೂಲಕ ಈ ಪ್ರಶಸ್ತಿಯನ್ನು ನೀಡಲಾಯಿತು.
ಈ ಸ್ವಯಂಸೇವಕಿಯರು ಸಾಮಾಜಿಕ ಸೇವೆ, ಸ್ವಚ್ಛತಾ ಜಾಗೃತಿ, ಹಸಿರೀಕರಣ, ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮನೆ ಮಾತಾಗಿರುವ ಪರೋಪಕಾರಂ, ಚೆನ್ನುಡಿ ಬಳಗ, ಪರ್ಯಾವರಣ ಸಂರಕ್ಷಣಾ ಟ್ರಸ್ಟ್, ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ ಮತ್ತಿತರ ಸಂಘಟನೆಗಳ ಜತೆಗೂ ನಿರಂತರವಾಗಿ ಭಾಗವಹಿಸುತ್ತಾ ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಕಾಲೇಜಿನ ಪ್ರಾಚಾರ್ಯರಾದ ಡಾ.ಎಚ್.ಎಸ್.ನಾಗಭೂಷಣ, ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿಗಳಾದ ಡಾ.ಬಾಲಕೃಷ್ಣ ಹೆಗಡೆ, ದೀಪಿಕಾ ವಿ., ಅಧ್ಯಾಪಕ-ಅಧ್ಯಾಪಕೇತರ ಸಿಬ್ಬಂದಿಗಳು, ಎನ್.ಇ.ಎಸ್.ಆಡಳಿತ ಮಂಡಳಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ.