ಮೈಸೂರು: ಬಾಲ್ಯದಿಂದಲೇ ದೈಹಿಕ ಹಾಗೂ ಮಾನಸಿಕ ಶಿಸ್ತನ್ನು ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಸಾಧನೆಗಳನ್ನು ಮಾಡಬಹುದು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಯೋಗ ದಸರಾ ಉಪ ಸಮಿತಿ ವತಿಯಿಂದ ನಗರದ ಅರಮನೆ ಮುಂಭಾಗ ಏರ್ಪಡಿಸಲಾಗಿದ್ದ ಯೋಗ ಪ್ರದರ್ಶನ ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾವು ಸಂಭ್ರಮ, ಸಡಗರ ಹಾಗೂ ಸುಂದರವಾದ ಜೀವನ ರೂಪಿಸಿಕೊಳ್ಳಬೇಕಾದಲ್ಲಿ ದೈಹಿಕವಾಗಿ ಸದೃಢರಾಗಿರಬೇಕು. ಮಾನಸಿಕವಾಗಿ ಎಲ್ಲವನ್ನೂ ಎದುರಿಸುವ ಶಕ್ತಿ ಹೊಂದಿರಬೇಕು. ಇದು ಸಾಧ್ಯವಾಗಬೇಕಾದಲ್ಲಿ ಯೋಗದಂತಹ ಚಟುವಟಿಕೆ ಮುಖ್ಯ. ಇದನ್ನು ಪತಂಜಲಿ ಸೂತ್ರವೂ ಹೇಳುತ್ತದೆ ಎಂದರು.
ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಸರ್ವೇ ನಡೆಸಿದ ವೇಳೆ ಸಾಕಷ್ಟು ಮಂದಿ ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಯಾಯ ಮೊಹಲ್ಲಾಗಳಲ್ಲಿಯೇ ವಾರದಲ್ಲಿ ಮೂರು ದಿವಸ ಯೋಗ ಕಾರ್ಯಕ್ರಮ ಏರ್ಪಡಿಸಲಾಗುವುದು. ಈ ಮೂಲಕ ಮುಂದಿನ ಐದು ವರ್ಷದಲ್ಲಿ ಮಧುಮೇಹಿಗಳ ಸಂಖ್ಯೆಯನ್ನು ನಿಯಂತ್ರಣಕ್ಕೆ ತರಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಉಪ ಮೇಯರ್ ರೂಪ, ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಆಯುಷ್ನ ಡಾ.ಲಕ್ಷ್ಮಿನಾರಾಯಣ ಶಣೈ, ಶ್ರೀಹರಿ, ಡಾ.ಪುಷ್ಪ, ಡಾ.ಕುಸುಮ, ಗಜಾನನ ಹೆಗಡೆ, ಡಾ.ಮಹೇಶ್, ದೇವರಾಜ್ ಮುಂತಾದವರು ಹಾಜರಿದ್ದರು. ಇದೇ ವೇಳೆ ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸುರಭಿ, ಅಂಕಿತ ಹಾಗೂ ವರ್ಷಾಳನ್ನು ಸನ್ಮಾನಿಸಲಾಯಿತು.