ಮಂಗಳೂರು: ಮಿಲಾಗ್ರಿಸ್ ವಿದ್ಯಾ ಸಂಸ್ಥೆಯಲ್ಲಿ ಸೆ. 10ರಂದು ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ನ ಸದಸ್ಯರಾದ ಎಸ್. ಎಲ್. ಭೋಜೆಗೌಡ ಆಗಮಿಸಿ ತಮ್ಮ ಭಾಷಣದಲ್ಲಿ “ವಿದ್ಯಾರ್ಥಿಗಳನ್ನು ಒಳ್ಳೆಯ ಪ್ರಜೆಯಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರ, ಭಾರತವು ಪ್ರಪಂಚಕ್ಕೆ ಭಾವೈಕ್ಯತೆ ಸಾರಿದ ದೇಶ, ನಮ್ಮ ದೇಶವನ್ನು ಸರ್ವಜನಾಂಗದ ಶಾಂತಿ ತೋಟವನ್ನಾಗಿಸುವುದು ಶಿಕ್ಷಕರ ಕರ್ತವ್ಯ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ನವ ಭಾರತ ನಿರ್ಮಾಣದ ಕನಸು ಮೂಡಿಸುವ ಕೆಲಸ ಮಾಡಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಿಲಾಗ್ರಿಸ್ ವಿದ್ಯಾಸಂಸ್ಥೆಯ ಸಂಚಾಲಕರಾಗಿರುವ ವಂ. ಗುರು ಬೊನವೆಂಚೆರ್ ನಝರೆತ್ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡಿ, ಉತ್ತಮ ಭವಿಷ್ಯವನ್ನುರೂಪಿಸುವ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯವನ್ನು ಹೇಳಿದರು.
ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಮೆಲ್ವಿನ್ ವಾಸ್, ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ವಂದಗುರು. ಉದಯ ಫೆರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ವಂದ. ಗುರು. ಮೈಕಲ್ ಸಾಂತುಮಾಯೋರ್ ಸ್ವಾಗತಿಸಿ, ಉಪನ್ಯಾಸಕಿ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು. ಮಿಲಾಗ್ರಿಸ್ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಸ್ಟಾನಿ ಬಾರೆಟ್ಟೋ ವಂದಿಸಿದರು.