ಮಂಗಳೂರು: ಮನುಷ್ಯನಲ್ಲಿರುವ ಪ್ರತಿಭೆಯ ಪೂರ್ಣ ಅಭಿವ್ಯಕ್ತಿಗೆ ರಂಗಭೂಮಿ ಸಮರ್ಥ ಮಾಧ್ಯಮ. ಕಲಾವೇದಿಕೆಯ ಕುರಿತು ಅಭಿಮಾನ ಶ್ರದ್ಧೆ, ಬದ್ಧತೆ ಇದ್ದಲ್ಲಿ ಪರಿಪೂರ್ಣ ಕಲಾವಿದನಾಗಿ ಹೊರಹೊಮ್ಮಲು ಸಾಧ್ಯ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ, ಚಿತ್ರನಟ ರವಿ ರಾಮಕುಂಜ ಅವರು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ. ಕ., ಜನಪಥ ಮಂಗಳೂರು ಮತ್ತು ಬೆಸೆಂಟ್ ಮಹಿಳಾ ಕಾಲೇಜಿನ ಬೆನಾಕ ತಂಡದ ಸಹಯೋಗದಲ್ಲಿ ಏರ್ಪಡಿಸಿದ್ದ ರಂಗ ದಿನ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು.
ಸಮಾರಂಭವನ್ನು ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಮತ್ತು ಕಾಲೇಜಿನ ಸಂಚಾಲಕರಾದ ಡಾ. ಮಂಜುಳಾ ಕೆ. ಟಿ. ಉದ್ಘಾಟಿಸಿ ಸಾಹಿತ್ಯದ ಪರಿಣಾಮಕಾರಿ ಅಭಿವ್ಯಕ್ತಿಗೆ ನಾಟಕವು ಸೂಕ್ತ ಮಾಧ್ಯಮ ಎಂದು ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ. ಅವರು ಮಾತನಾಡಿ ಇಂದಿನ ಯುವ ಜನತೆ ರಂಗಭೂಮಿಯ ಕುರಿತು ವಿಶೇಷ ತಿಳುವಳಿಕೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್ ಕುಮಾರ್ ಶೆಟ್ಟಿ ಪಿ. ಅವರು ಸಭಾಧ್ಯಕ್ಷತೆ ವಹಿಸಿದ್ದು ರಂಗಭೂಮಿಯ ಅಭಿರುಚಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಲ್ಲಿ ಸಮಾಜದ ಹಲವು ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯ ಎಂದು ಹೇಳಿದರು.
ಸಭಾ ವೇದಿಕೆಯಲ್ಲಿ ನಿವೃತ್ತ ಪ್ರಾಧ್ಯಾಪಕಿ ಮತ್ತು ರಂಗ ತಜ್ಞೆ ಡಾ. ಮೀನಾಕ್ಷಿ ರಾಮಚಂದ್ರ, ಭರತನಾಟ್ಯ ಕಲಾವಿದೆ ಮತ್ತು ಕಲಾಭಿ (ರಿ.) ತಂಡದ ಸದಸ್ಯೆ ಕು. ತೃಷಾ ಶೆಟ್ಟಿ, ಜನಪಥ ಮಂಗಳೂರು ತಂಡದ ಮುಖ್ಯಸ್ಥ ಸುರೇಶ್ ಬಟ್ಟೇಕಳ್ ವರ್ಕಾಡಿ, ವಿದ್ಯಾರ್ಥಿ ಕಾರ್ಯದರ್ಶಿ ಕು. ಅನುಷಾ, ಮತ್ತಿತರರು ಉಪಸ್ಥಿತರಿದ್ದರು.
ಬೆನಾಕ ತಂಡದ ಸಂಚಾಲಕರಾದ ಡಾ. ಗಿರಿಯಪ್ಪ ಸ್ವಾಗತಿಸಿದರು. ಸದಸ್ಯರಾದ ಪ್ರವೀಣ್ ಕಾಮತ್, ಕೂ. ದಿವ್ಯಾ ಬಿ. ಅತಿಥಿಗಳನ್ನು ಪರಿಚಯಿಸಿದರು.
ಎಫ್ ಎನ್ ಡಿ ಉಪನ್ಯಾಸಕಿ ಸುಪ್ರಜಾ ಲಕ್ಷ್ಮಿ ವಂದಿಸಿದರು. ಕು. ಅನುಜ್ಞಾ ಪ್ರಾರ್ಥಿಸಿದರು. ಉಪನ್ಯಾಸಕ ರವಿರಾಜ್ ಎಸ್. ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ಬೆನಾಕ ತಂಡದ ವಿದ್ಯಾರ್ಥಿಗಳು ಸುರೇಶ್ ಬಟ್ಟೇಕಳ್ ವರ್ಕಾಡಿ ರಚನೆ ಮತ್ತು ನಿರ್ದೇಶನದ “ಅಲೆಮಾರಿಗಳು” ಎಂಬ ಸಾಮಾಜಿಕ ನಾಟಕವನ್ನು ಪ್ರಸ್ತುತ ಪಡಿಸಿದರು.