ಮಂಡ್ಯ: ಸಮಾಜದಲ್ಲಿ ವಿಶೇಷ ಚೇತನರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಎಲ್ಲರೂ ಪ್ರೇರಣಾ ಶಕ್ತಿ ತುಂಬಿ, ಅಗತ್ಯ ಸಹಾಯ – ಸಹಕಾರ ನೀಡಬೇಕು ಎಂದು ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಕರೆ ನೀಡಿದರು.
ಕನ್ನಿಕ ಶಿಲ್ಪ ನವೋದಯ ತರಬೇತಿ ಕೇಂದ್ರ ಹಾಗೂ ಪಾಂಡವಪುರದ ಕ್ಯಾತನಹಳ್ಳಿಯ ದಿವ್ಯಾಂಗ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಹರ್ಡೇಕರ ಭವನದಲ್ಲಿ ನಡೆದ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ವಿಶೇಷ ಚೇತನ ಕವಿಗಳ ಕವಿಗೋಷ್ಠಿ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಸಮಾಜದ ಹಿತವನ್ನು, ಸ್ವಾಸ್ಥ್ಯವನ್ನು ಕಾಯಲು ಸಾಹಿತ್ಯ ತುಂಬಾ ಅಗತ್ಯವಾದ ಸಾಧನ. ಇಂತಹ ಸಾಹಿತ್ಯ ರಚನೆ ಹೆಚ್ಚಾಗಬೇಕು. ಆಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ವಿಕಲ ಚೇತನರು ಸಹ ತಮ್ಮ ಭಾವನೆಗಳನ್ನು ಕವಿತೆಯ ಮೂಲಕ ವ್ಯಕ್ತಪಡಿಸಲು ಕವಿಗೋಷ್ಠಿ ಆಯೋಜನೆ ಮಾಡಿರುವ ಸಂಘಟಕರ ಕಾರ್ಯ ಸ್ತುತ್ಯಾರ್ಹ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ‘ಜೀವನಾಡಿ’ ಮಾಸಪತ್ರಿಕೆಯ ಸಂಪಾದಕ ಪ್ರೊ.ಹೆಚ್.ಎಸ್. ಮುದ್ದೇಗೌಡ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಹಣ ಸಂಪಾದಿಸುವ, ಸಂಗ್ರಹಿಸುವ, ಅದನ್ನು ದುಂದು ವೆಚ್ಚ ಮಾಡುವ ಮನೋಭಾವ ಹೆಚ್ಚಾಗುತ್ತಿದೆ. ಇಂತಹ ಪ್ರವೃತ್ತಿ ಒಳ್ಳೆಯದಲ್ಲ. ಸಂಪಾದನೆಯಲ್ಲಿ ಒಂದಿಷ್ಟು ಹಣವನ್ನು ಸಮಾಜದಲ್ಲಿನ ಅಶಕ್ತರ ನೆರವಿಗೆ ಬಳಸಬೇಕು ಎಂದರು.
ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ವಿಕಲ ಚೇತನರಿಗೆ ನಾವು ಅನುಕಂಪ ತೋರುವ ಬದಲಿಗೆ, ಅವರಲ್ಲಿ ಚೈತನ್ಯ ಉಕ್ಕಿಸಿ ಆತ್ಮವಿಶ್ವಾಸ ತಂಬಬೇಕು. ಸಕಾಲಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಅವರಲ್ಲಿನ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಬೇಕು. ಅವರ ಸಾಧನೆಗೂ ಮನ್ನಣೆ ನೀಡಿ ಗೌರವಿಸಿದಾಗ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ. ರವಿಕುಮಾರ್ ಉದ್ಟಾಟಿಸಿದರು. ಕನ್ನಿಕ ಶಿಲ್ಪ ತರಬೇತಿ ಕೇಂದ್ರದ ಸ್ಥಾಪಕಿ ಡಾ.ಹೆಚ್.ಆರ್. ಕನ್ನಿಕಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭಾರತ ಸೇವಾದಳದ ಕಾರ್ಯದರ್ಶಿ ಜಿ.ವಿ. ನಾಗರಾಜು, ಮೈಸೂರಿನ ಸರ್ಕಾರಿ ಅಂಧ ಮಕ್ಕಳ ಪಾಠಶಾಲೆಯ ಅಧೀಕ್ಷಕ ಸತೀಶ್ ಕ್ಯಾತನಹಳ್ಳಿ, ದಿವ್ಯಾಂಗ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಂಗನಾಥ್ ಕ್ಯಾತನಹಳ್ಳಿ ಉಪಸ್ಥಿತರಿದ್ದರು.