ಚೆನ್ನೈ: ಅತಿಸಾರ ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುದುಚೇರಿಯ ಕಾರೈಕಾಲ್ ಪ್ರದೇಶದಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಲು ಸೋಮವಾರದಿಂದ ಬುಧವಾರದವರೆಗೆ ಶಾಲೆಗಳನ್ನು ಮುಚ್ಚಲಾಗುವುದು ಎಂದು ಜಿಲ್ಲಾಡಳಿತ ಹೇಳಿಕೆಯಲ್ಲಿ ತಿಳಿಸಿದೆ.
ಜಿಲ್ಲಾ ಆರೋಗ್ಯ ಇಲಾಖೆಯ ಪ್ರಕಾರ, ಪ್ರಸ್ತುತ ಆಸ್ಪತ್ರೆಗೆ ದಾಖಲಾದ ಅನೇಕ ರೋಗಿಗಳಲ್ಲಿ ಅತಿಸಾರದ ಜೊತೆಗೆ ಕಾಲರಾ ಸಹ ಪತ್ತೆಯಾಗಿರುವುದರಿಂದ ಪರಿಸ್ಥಿತಿ ಚಿಂತಾಜನಕವಾಗಿದೆ.
ಸೋಮವಾರ, ಕಾರೈಕಲ್ ಜಿಲ್ಲಾಧಿಕಾರಿ ಮೊಹಮ್ಮದ್ ಮನ್ಸೂನ್, “ನಾವು ಹಲವಾರು ಪ್ರಕರಣಗಳ ಮಾದರಿಗಳನ್ನು ತೆಗೆದುಕೊಂಡಿದ್ದೇವೆ ಮತ್ತು ವಿಬ್ರಿಯೋ ಕಾಲರಾ ಇರುವಿಕೆಯನ್ನು ಕಂಡುಕೊಂಡಿದ್ದೇವೆ. ಆರೋಗ್ಯ ತುರ್ತುಸ್ಥಿತಿ ಘೋಷಿಸಿದ ಪರಿಣಾಮವಾಗಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ನಾವು ಸಿಆರ್ಪಿಸಿಯ ಸೆಕ್ಷನ್ 144 (2) ಅನ್ನು ಜಾರಿ ಪಡಿಸಿದ್ದೇವೆ ಎಂದು ಹೇಳಿದರು.
ಎಲ್ಲಾ ರೆಸ್ಟೋರೆಂಟ್, ಹೋಟೆಲ್ ಮತ್ತು ಉಪಾಹಾರ ಗೃಹಗಳಿಗೆ ಬೇಯಿಸಿದ ಆರ್ ಒ ಸಂಸ್ಕರಿಸಿದ ಕುಡಿಯುವ ನೀರನ್ನು ಒದಗಿಸಲು ನಿರ್ದೇಶಿಸಲಾಗಿದೆ ಎಂದು ಹೇಳಿದ ಅವರು, ಎಲ್ಲಾ ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಲು ಮತ್ತು ಕ್ಲೋರಿನೇಟ್ ಮಾಡಲು ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ ಪ್ರತಿ ಲೀಟರ್ ನೀರಿಗೆ ಸುಮಾರು ೦.೫ ಮಿಗ್ರಾಂ ಕ್ಲೋರಿನೇಷನ್ ಅಗತ್ಯವಿದೆ ಎಂದು ಆಡಳಿತವು ಹೇಳಿದೆ.
ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ರೆಸ್ಟೋರೆಂಟ್, ಹೋಟೆಲ್ ಮತ್ತು ಮದುವೆ ಹಾಲ್ ಮತ್ತು ಕ್ಲಬ್ ಗಳ ತಪಾಸಣೆಗಳನ್ನು ನಡೆಸುವಂತೆ ಮನ್ಸೂನ್ ಕಂದಾಯ, ಆಹಾರ ಮತ್ತು ಆರೋಗ್ಯ ಪರಿವೀಕ್ಷಕರಿಗೆ ನಿರ್ದೇಶನ ನೀಡಿದೆ.
ಜಿಲ್ಲಾಡಳಿತದ ಪ್ರಕಾರ, ಸುಮಾರು 1,600 ಜನರು ಅತಿಸಾರ ಮತ್ತು ಹೊಟ್ಟೆನೋವಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದು, ಕಳೆದ ಕೆಲವು ದಿನಗಳಲ್ಲಿ ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.