ಮೈಸೂರು: 75ನೇ ಸ್ವಾತಂತ್ರ್ಯ ವರ್ಷಾಚರಣೆ ಸಂದರ್ಭದಲ್ಲಿ ಸಂಘಟಿತವಾಗಿದ್ದ ರಾಜ್ಯ ಮಟ್ಟದ ವಿದ್ಯಾರ್ಥಿಗಳ ಅಧ್ಯಯನ ಶಿಬಿರವು ಮೂರು ದಿನಗಳ ಕಾಲ ನಗರದ ನಂಜರಾಜ ಬಹಾದ್ದೂರ್ ಛತ್ರದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಸ್ವಾತಂತ್ರ್ಯ ಚಳುವಳಿ, ಮಹಾನ್ ವ್ಯಕ್ತಿಗಳ ಜೀವನ – ಆದರ್ಶದ, ವಿದ್ಯಾರ್ಥಿಗಳ ಹೋರಾಟದ ಕುರಿತು ಚರ್ಚೆಗಳು, ಸಿನೆಮಾ ಪ್ರದರ್ಶನ, ಕ್ರೀಡೆ ಮುಂತಾದ ಚಟುವಟಿಕೆಗಳು ನಡೆಯಲಿವೆ.
ಎಐಡಿಎಸ್ ಓ ದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸೌರವ್ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ಯಾವುದೇ ರಾಜ್ಯ ಸರ್ಕಾರಗಳು ಶಿಕ್ಷಣವನ್ನು ಉಳಿಸುವ – ಬೆಳೆಸುವ ಉದ್ದೇಶವನ್ನು ಸಂಪೂರ್ಣ ಮರೆತು, ಶಿಕ್ಷಣವನ್ನು ಮತ್ತಷ್ಟು ಖಾಸಗಿ ಮಾಡುವ ದಿಕ್ಕಿನಲ್ಲಿ ನೀತಿ – ನಿರ್ಧಾರಗಳನ್ನು ರೂಪಿಸುತ್ತಿದೆ. ಈ ಹುನ್ನಾರದ ವಿರುದ್ಧ ನಮ್ಮ ಹೋರಾಟದ ದೃಷ್ಟಿಕೋನ ಬೆಳೆಯಬೇಕು. ಶಿಕ್ಷಣವು ಮನುಷ್ಯನಲ್ಲಿ ತಾರ್ಕಿಕ ಚಿಂತನೆ, ಜ್ಞಾನ, ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂಬುದು ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಉದ್ದೇಶ. ಆ ಮಹಾನ್ ಉದ್ದೇಶವನ್ನು ಉಳಿಸಲು ನಾವು ಒಂದಾಗಬೇಕು ಎಂದರು.
ಈ ಶಿಬಿರದ ಮೂಲಕ ನಾವು ಹೊಸ ಮನುಷ್ಯರಾಗಬೇಕು. ಪ್ರಶ್ನೆ ಮಾಡುವ ಮನೋಭಾವ, ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಿ. ಪ್ರಜಾತಾಂತ್ರಿಕ, ವೈಜ್ಞಾನಿಕ ಧರ್ಮನಿರಪೇಕ್ಷ ಶಿಕ್ಷಣದ ಉದ್ದೇಶದಿಂದ ಭಗತ್ ಸಿಂಗ್, ನೇತಾಜಿ ಅವಿರತ ಹೋರಾಟ ಕಟ್ಟಿದರು. ಆ ಮಹಾನ್ ಕಾರ್ಯವನ್ನು ನಾವು ಪೂರ್ಣಗೊಳಿಸಬೇಕು. ಅದಕ್ಕೆ ಎಲ್ಲರೂ ಒಂದಾಗಿ, ಶಿಕ್ಷಣವನ್ನು ಉಳಿಸುವ ಆಂದೋಲನಕ್ಕೆ ಸಿದ್ಧರಾಗಬೇಕು” ಎಂದು ಕರೆ ನೀಡಿದರು.
ರಾಜ್ಯ ಕಚೇರಿ ಕಾರ್ಯದರ್ಶಿ ಸಿತಾರ ಹೆಚ್.ಎಂ. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖಿಲ ಭಾರತ ಅಧ್ಯಕ್ಷರಾದ ವಿ.ಎನ್. ರಾಜಶೇಖರ್, ರಾಜ್ಯ ಅಧ್ಯಕ್ಷರಾದ ಅಶ್ವಿನಿ ಕೆ.ಎಸ್., ರಾಜ್ಯ ಕಾರ್ಯದರ್ಶಿಗಳಾದ ಅಜಯ್ ಕಾಮತ್, ರಾಜ್ಯ ಉಪಾಧ್ಯಕ್ಷರಾದ ಹಣಮಂತ ಎಸ್.ಎಚ್., ರಾಜ್ಯ ಖಜಾಂಚಿ ಅಭಯಾ ದಿವಾಕರ್ ಸೇರಿದಂತೆ ಇತರ ರಾಜ್ಯ ಸೆಕ್ರೆಟರಿಯಟ್ ಸದಸ್ಯರು ಇದ್ದರು.