ಮೈಸೂರು: ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ (SDMIMD) ಸಂಸ್ಥೆಯವರು, ಬಿಸಿನೆಸ್ ಅನಾಲಿಟಿಕ್ಸ್ ಇನ್ಸ್ಟಿಟ್ಯೂಟ್ (BAI), ಫ್ರಾನ್ಸ್ ನವರ ಸಹಯೋಗದೊಂದಿಗೆ ’ಕೃತಕ ಬುದ್ಧಿಮತ್ತೆಯಿಂದ ಒಳಿತು’ ಕುರಿತು ಚಳಿಗಾಲದ ಶಾಲೆಯನ್ನು ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಯ ಆವರಣದಲ್ಲಿ ನಡೆಸಿದರು.
ಈ ಕಾರ್ಯಕ್ರಮದಲ್ಲಿ ಕಂಪನಿಗಳ ಅಧಿಕಾರಿಗಳು ಹಾಗೂ ಅನೇಕ ಯುರೋಪಿಯನ್ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಭಾಗವಹಿಸಿದರು. ಬೆಲ್ಜಿಯಂ, ಸ್ವಿಟ್ಜರ್ಲೆಂಡ್, ಫ್ರಾನ್ಸ್ ಹಾಗೂ ಉಕ್ರೇನ್ ದೇಶಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ಜೊತೆ ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಯ ಹತ್ತು ಮಂದಿ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದರು.
‘ಕೃತಕ ಬುದ್ಧಿಮತ್ತೆಯಿಂದ ಒಳಿತು’ – ಈ ವಿಷಯವನ್ನು ಕೇಂದ್ರವಾಗಿ ಇಟ್ಟುಕೊಂಡು ನಡೆಸಿದ ಈ ಕಾರ್ಯಕ್ರಮದಲ್ಲಿ ಮೌಲ್ಯಯುತ ಆಧುನಿಕ ಬುದ್ಧಿಮತ್ತೆ, ಸಾಮಾಜಿಕ ಒಳಿತಿಗಾಗಿ ಆಧುನಿಕ ಬುದ್ಧಿಮತ್ತೆ – ಇವುಗಳ ಬಗ್ಗೆ ಚರ್ಚೆ, ಯಂತ್ರ ಕಲಿಕೆ ಪರಿಕರಗಳನ್ನು ಕುರಿತು ಕಾರ್ಯಾಗಾರ – ಎಲ್ಲವೂ ಇದ್ದವು. ಈ ಕಾರ್ಯಕ್ರಮದ ಭಾಗವಾಗಿ ವಿನಿಮಯ ವಿದ್ಯಾರ್ಥಿಗಳು ಧರ್ಮಸ್ಥಳಕ್ಕೆ ಭೇಟಿ ನೀಡಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಇವರನ್ನು ಭೇಟಿ ಮಾಡಿ, ಎಸ್ ಡಿ ಎಮ್ ಟ್ರಸ್ಟ್ ನಿಂದ ನಡೆಯುವ ಗ್ರಾಮೀಣ ಅಭಿವೃದ್ಧಿ, ಕಿರು ಹಣಕಾಸು ಮತ್ತು ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡರು.
ಆರೋಗ್ಯಾಭಿವೃದ್ಧಿ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ – ಇವುಗಳ ದಕ್ಷತೆ ಹಾಗೂ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಆಧುನಿಕ ಬುದ್ಧಿಮತ್ತೆಯ ಬಳಕೆಯನ್ನು ಕುರಿತು ಉಪಯೋಗಿಸಬಹುದಾದ ಪ್ರಕರಣಗಳನ್ನು ಭಾಗವಹಿಸಿದ್ದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಡಾ. ಲೀ ಶ್ಲೆಂಕರ್ ಮತ್ತು ಪ್ರೊ. ಡೆವಿ ಸಿಯೆಲೆನ್, ಬಿಸಿನೆಸ್ ಅನಾಲಿಟಿಕ್ಸ್ ಇನ್ಸ್ಟಿಟ್ಯೂಟ್, ಪ್ರೊ. ಕ್ರಿಸ್ಟಿಯನ್ ಹಿಟ್ಝ್, ಜುರಿಕ್ ವಿಶ್ವವಿದ್ಯಾನಿಲಯ ಮತ್ತು ಪ್ರೊಫ಼್. ಮೊಹಮದ್ ಮಿನ್ಹಾಜ್, ಎಸ್ ಡಿ ಎಮ್ ಐ ಎಮ್ ಡಿ, ಮೈಸೂರು – ಇವರುಗಳು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಹೀಲ್ಬ್ರಾನ್ ವಿಶ್ವವಿದ್ಯಾನಿಲಯ, ಜರ್ಮನಿಯಿಂದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು, ಎರಡು ಸಂಸ್ಥೆಗಳ ನಡುವಿನ ವಿದ್ಯಾರ್ಥಿ ಮತ್ತು ಅಧ್ಯಾಪಕ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಗೆ ಫೆಬ್ರವರಿ 20 – 28, 2023 ನಡುವೆ ಆಗಮಿಸಲಿದ್ದಾರೆ.