ಪುತ್ತೂರು: ಆಶ್ವೀಜ ಮಾಸ ಶುಕ್ಲಪಕ್ಷದ ಹುಣ್ಣಿಮೆಯ ದಿನ ಆಚರಿಸುವ ವಾಲ್ಮೀಕಿ ಜಯಂತಿಯು ಎಲ್ಲರ ಮನ ಪರಿವರ್ತನೆಗೆ ಕಾರಣವಾಗಬೇಕು. ಕ್ರೌರ್ಯವೇ ಮಾನವನ ಸ್ವಭಾವ ಎಂದು ಭಾವಿಸುವ ಈ ಕಾಲ ಘಟ್ಟದಲ್ಲಿ ವಾಲ್ಮೀಕಿಯ ಆದರ್ಶಗಳು ಅನುಕರಣಿಯ.
ಉತ್ತಮ ಜೀವನ ನಡೆಸಲು ಕ್ರೌರ್ಯವೇ ಸಾಧನ ಅಲ್ಲ ಎಂದು ತನ್ನ ಜೀವನದ ಮೂಲಕ ಸಾಧಿ ತೋರಿಸಿದ ಮಹಾನ್ ಕವಿ ವಾಲ್ಮೀಕಿಯ ಜೀವಾನಾದರ್ಶಗಳನ್ನು ಅಳವಡಿಸಿಕೊಂಡು ಇಂದಿನ ಸಮಾಜದ ಪರಿವರ್ತನೆಗೆ ನಾವು ಕಾರಣೀಭೂತರಾಗಬೇಕಿದೆ ಎಂದು ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ(ಸಿಬಿಎಸ್ಇ)ದ ಪ್ರಾಚಾರ್ಯೆ ಮಾಲತಿ ಡಿ. ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಬುಧವಾರ ಆಚರಿಸಲಾದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಒಳಗಿನ ಮೌನ ಅತೀ ಮುಖ್ಯ. ನಮ್ಮ ಅಂತರ್ಯದಲ್ಲಿ ಮೌನ ತುಂಬಿದಾಗ ಹೊರಗಿನ ಸ್ವಚ್ಛಂದ ಬೆಳಕು ನಮ್ಮೊಳಗೆ ಹರಿದು ಬರುತ್ತದೆ. ನಮ್ಮ ಒಳಗಿನಿಂದ ಪರಿವರ್ತನೆ ಆದರೆ ಮಾತ್ರ ಈ ಜಗತ್ತು ಪರಿವರ್ತನೆಯಾಗುತ್ತದೆ ಎಂದರಲ್ಲದೆ ಜಗತ್ತಿನಲ್ಲಿಯೇ ಶ್ರೇಷ್ಠ ಗ್ರಂಥವಾದ ರಾಮಾಯಣವನ್ನು ರಚಿಸಿದ ಮಹಾಕವಿ ವಾಲ್ಮೀಕಿ. ರಾಮಾಯಣದಲ್ಲಿ ೨೪ ಸಾವಿರ ಶ್ಲೋಕಗಳನ್ನು ರಚಿಸಿದ್ದಾರೆ ಹಾಗೂ ೪,೦೮೦೦೮ ಸಂಸ್ಕತ ಪದಗಳನ್ನು ಉಪಯೋಗಿಸಿದ್ದಾರೆ. ರಾಮನನ್ನು ನಮಗೆ ಪರಿಚಯಿಸಿದ ಈ ಮಹಾನ್ ಕವಿ ಎಂದಿಗೂ ಚಿರಸ್ಮರಣೀಯ ಎಂದರು.
ವಾಲ್ಮೀಕಿ ಮಹರ್ಷಿಯ ಪೂರ್ವಾಶ್ರಮದ ಹೆಸರು ರತ್ನಾಕರ. ಆತನು ಮುನಿಯ ಮಗನಾಗಿ ಹುಟ್ಟಿದರೂ ಆಕಸ್ಮಿಕವಾಗಿ ಬೇಡರ ಕೈವಶವಾಗಿ ಕೊಲೆಗಡುಕ ಪ್ರವೃತ್ತಿಯನ್ನು ತನ್ನದಾಗಿಸಿಕೊಂಡನು. ಕೆಟ್ಟ ಮನಃಸ್ಥಿತಿಯ ಜನರ ಸಹವಾಸದಿಂದಾಗಿ ಪಾಪ ಪುಣ್ಯಗಳ ಅರಿವಿಲ್ಲದೆ ದುಷ್ಕೃತ್ಯಗಳನ್ನುಮಾಡುತ್ತಾ ಜೀವನ ಸಾಗಿಸುತ್ತಿದ್ದನು. ತದನಂತರ ನಾರದರ ಭೇಟಿಯ ಕಾರಣದಿಂದಲಾಗಿ ತನ್ನ ದುಷ್ಕೃತ್ಯಗಳನ್ನು ತ್ಯಜಿಸಿ ಪರಿವರ್ತನೆಗೆ ಮುಂದಾದನು. ಮುಂದೆ ತನ್ನ ಮಾತು ಮನಸ್ಸು ಶರೀರವನ್ನು ಮೌನವಾಗಿಸಿ ರಾಮನಾಮ ಜಪದಲ್ಲಿ ತೊಡಗಿ ತನ್ನ ಸುತ್ತ ಬೃಹದಾಕಾರದ ಹುತ್ತ ಬೆಳೆದರೂ ಲಕ್ಷಿಸದೆ ಪೂರ್ಣ ಜ್ಞಾನದ ಸಾಕ್ಷತ್ಕಾರವಾದ ಮೇಲೆ ಹುತ್ತದಿಂದ ಹೊರಗೆ ಬಂದನು. ಹುತ್ತದಿಂದ ಹೊಸ ಹುಟ್ಟು ಪಡೆದ ರತ್ನಾಕರ ವಾಲ್ಮೀಕಿಯೆಂದು ಜಗತ್ಪçಸಿದ್ಧಿ ಪಡೆದನು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಶಂಕರನಾರಾಯಣ ಭಟ್, ಕಾರ್ಯಕ್ರಮ ಆಯೋಜನಾ ಘಟಕದ ಸಂಯೋಜಕ ನಮೃತ್ ಜಿ. ಉಚ್ಚಿಲ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸ ವರ್ಗದವರು ಹಾಗೂ ಎಲ್ಲಾ ಸಿಬ್ಬದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ವಿದ್ಯಾರ್ಥಿಸಂಘದ ಅಧ್ಯಕ್ಷೆ ಪ್ರೀತಲ್ ದಯಾನಂದ್ ಹಾಗೂ ಕಾರ್ಯದರ್ಶಿ ಮೋಹಿತ್ ಕೆ. ಎಸ್ ಸಹಕರಿಸಿದರು. ಸಂಸ್ಥೆಯ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಯಾದ ಆರ್ಯಹಿಮಾಲಯ ನಿರೂಪಿಸಿ ವಂದಿಸಿದರು.