ಪಿರಿಯಾಪಟ್ಟಣ: ಮಳೆಯಿಂದ ರೈತರಿಗೆ ಉಂಟಾಗಿರುವ ಬೆಳೆ ನಾಶದ ಪರಿಹಾರ ಒದಗಿಸಿ ಕೊಡುವ ಸಂಬಂಧ ಪಿರಿಯಾಪಟ್ಟಣ ತಾಲೂಕಿನ ವಿವಿಧ ಸ್ಥಳಗಳಿಗೆ ತಹಶೀಲ್ದಾರ್ ಸುರೇಂದ್ರ ಮೂರ್ತಿ ಹಾಗೂ ಕೃಷಿ ಇಲಾಖೆ ಸಹಾಯಕ ನಿರ್ದೇಶಕಪ್ರಸಾದ್ ಭೇಟಿ ನೀಡಿ ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದರು.
ತಾಲೂಕಿನ ಬೋರೆಹೊಸಹಳ್ಳಿ ಗ್ರಾಮದಲ್ಲಿ ಮಳೆಯಿಂದ ಬೆಳೆ ನಾಶವಾದ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸುರೇಂದ್ರ ಮೂರ್ತಿಯವರು ಮಾತನಾಡಿ ಕಳೆದ ಕೆಲ ದಿನಗಳ ಹಿಂದೆ ತಾಲೂಕಿನಲ್ಲಿ ಸತತವಾಗಿ ಬಿದ್ದ ಮಳೆಯಿಂದಾಗಿ ರೈತರು ಬೆಳೆದಿದ್ದ ಮಾಡಿದ್ದ ತಂಬಾಕು, ಜೋಳ, ಶುಂಠಿ ಸೇರಿದಂತೆ ಹಲವು ಬೆಳೆ ನಾಶವಾಗಿದೆ ಈ ಸಂಬಂಧ ರೈತರು ಸೂಕ್ತ ದಾಖಲಾತಿಗಳನ್ನು ಒದಗಿಸಿದರೆ ಸರ್ಕಾರದಿಂದ ನೀಡುವ ಬೆಳೆ ಪರಿಹಾರ ಒದಗಿಸಿಕೊಡಲು ಸಹಕಾರಿಯಾಗುತ್ತದೆ. ಬೆಳೆ ನಾಶವಾಗಿರುವ ರೈತರು ಸಂಬಂಧಿಸಿದ ತಮ್ಮ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಅವರು ಮಾತನಾಡಿ ಬೆಳೆ ನಾಶವಾಗಿರುವ ರೈತರು ತಮ್ಮ ಜಮೀನಿನ ಆರ್ ಟಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಬೆಳೆ ನಾಶವಾಗಿರುವ ಸ್ಥಳದ ಜಿಪಿಎಸ್ ಫೋಟೋಗಳನ್ನು ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಮಾಹಿತಿ ನೀಡಿದರೆ ಬೆಳೆ ಪರಿಹಾರ ಒದಗಿಸಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭ ಹಾರನಹಳ್ಳಿ, ಚಪ್ಪರದಹಳ್ಳಿ, ಚನಕಲ್ ಕಾವಲು, ಸುಂಡವಾಳು ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆಯಲಾಯಿತು.