ಬೆಳಗಾವಿ: ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಘಟನೆ ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮದಲ್ಲಿ ನಡೆದಿದೆ.
ಸಕ್ಕುಬಾಯಿ ಮಹಿಳೆ ಹಲವು ತಿಂಗಳುಗಳಿಂದ ಬಲಗಣ್ಣಿಗೆ ಸಮಸ್ಯೆಯಿಂದ ಬಳಲುತ್ತಿದ್ದರು. ಆರ್ಥಿಕ ಸಮಸ್ಯೆ ಕಾರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಕಣ್ಣಿಗೆ ಪೊರೆ ಬಂದ ಕಾರಣ ನೋವಿನಲ್ಲೇ ದಿನ ದೂಡುತ್ತಿದ್ದರು.
ಆದರೆ ತನಗೆ ಬರುತ್ತಿದ್ದ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಹಣವನ್ನು 10 ತಿಂಗಳುಗಳ ಕಾಲ ಕೂಡಿಟ್ಟು, ಒಟ್ಟು 20 ಸಾವಿರ ರೂಪಾಯಿಗಳು ಸಂಗ್ರಹವಾಗಿವೆ. ರಾಮದುರ್ಗ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಚಿಕಿತ್ಸೆ ನಂತರ ಸಂಪೂರ್ಣವಾಗಿ ಕಣ್ಣಿನ ದೋಷ ನಿವಾರಣೆಯಾಗಿದೆ. ಆಸ್ಪತ್ರೆಯಲ್ಲಿ ಒಟ್ಟು 26 ಸಾವಿರ ರೂಪಾಯಿ ಖರ್ಚು ಬಂದಿದ್ದು ಇದರಲ್ಲಿ 20 ಸಾವಿರ ಹಣ ಗೃಹಲಕ್ಷ್ಮಿ ಯೋಜನೆಯದ್ದಾಗಿದೆ ಇನ್ನು 6 ಸಾವಿರ ಹೇಗೋ ಸಂಗ್ರಹಿಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಇದರಿಂದ ಸಂತಸಗೊಂಡಿರುವ ಮಹಿಳೆ ಸಕ್ಕುಬಾಯಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.