ಚಾಮರಾಜನಗರ: ಹೊರ ಪ್ರಪಂಚದ ಅರಿವಾಗಬೇಕಾದರೆ ದೇಶ ಸುತ್ತು ಕೋಶ ಓದು ಎಂಬ ಮಾತು ಪ್ರಚಲಿತದಲ್ಲಿರುವುದನ್ನು ಕಾಣಬಹುದಾಗಿದೆ. ಇವತ್ತು ಮೊಬೈಲ್ ಜಮಾನದಲ್ಲಿ ಓದುಗರ ಸಂಖ್ಯೆ ಕ್ಷೀಣವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರ ಪರಿಣಾಮಗಳು ಪತ್ರಿಕೆಗಳ ಮೇಲೆ, ವಾಚನಾಲಯಗಳ ಮೇಲೆ ಬೀರುತ್ತಿದೆ.
ಮೊದಲಿಗೆ ಹೋಲಿಸಿದರೆ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿ ಗ್ರಂಥಾಲಯಗಳಿದ್ದರೂ ಅಲ್ಲಿಗೆ ಬರುವ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಕೆಲವು ಗ್ರಾಮಗಳ ಜನರ ವಾಚನಾಭಿರುಚಿ ಇನ್ನೂ ಕಡಿಮೆಯಾಗಿಲ್ಲ ಎನ್ನುವುದು ಸಂತಸದ ವಿಚಾರವಾಗಿದೆ. ಇದಕ್ಕೆ ಉದಾಹರಣೆ ಚಾಮರಾಜನಗರ ತಾಲೋಕಿನ ದೇಮಹಳ್ಳಿ ಗ್ರಾಮದಲ್ಲಿರುವ ಗ್ರಂಥಾಲಯವಾಗಿದೆ. ಈ ಗ್ರಾಮದಲ್ಲಿ ಎರಡು ಸಾವಿರಕ್ಕೂ ಅಧಿಕ ಜನ ಸಂಖ್ಯೆಯಿದ್ದು, ಇಲ್ಲೊಂದು ಪುಟ್ಟ ಗ್ರಂಥಾಲಯವಿದ್ದು ಅದು ಹಿಂದಿಗಿಂತಲೂ ಹೆಚ್ಚಿನ ಓದುಗರನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವುದು ವಿಶೇಷವಾಗಿದೆ.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಜನ ಟೀ ಅಂಗಡಿ, ದಿನಸಿ ಅಂಗಡಿಗಳ ಮುಂದೆ ಕುಳಿತು ಕಾಲ ಕಳೆಯುತ್ತಿರುತ್ತಾರೆ. ಆದರೆ ಈ ಗ್ರಾಮದಲ್ಲಿ ಹೆಚ್ಚಿನ ಜನರು ಬಿಡುವು ಸಿಕ್ಕಾಗ ಗ್ರಂಥಾಲಯಕ್ಕೆ ಬಂದು ಪತ್ರಿಕೆ ಓದುವುದನ್ನು ರೂಢಿಸಿಕೊಂಡಿದ್ದಾರೆ. ಜತೆಗೆ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಗ್ರಂಥಾಲಯದ ಓದುಗರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗಿದೆ. ಇದು ಪುಟ್ಟ ಗ್ರಾಮವಾಗಿದ್ದರೂ ಓದುಗರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿರುವುದು ಜನ ಪ್ರಜ್ಞಾವಂತರಾಗುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಈ ಗ್ರಂಥಾಲಯದ ಕಟ್ಟಡವನ್ನು ಸುಮಾರು 8 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಗ್ರಾಮ ಪಂಚಾಯ್ತಿ ವತಿಯಿಂದ ಎಲ್ಲಾ ರೀತಿಯ ಹಣಕಾಸಿನ ನೆರವು ನೀಡಿ ಗ್ರಂಥಾಲಯದ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಹೀಗಾಗಿಯೇ ಈ ಗ್ರಂಥಾಲಯ ಪುಟ್ಟದಾಗಿದ್ದರೂ ಜ್ಞಾನದ ಬಂಡಾರವನ್ನೇ ಹೊತ್ತು ನಿಂತಿದೆ. ಈಗಾಗಲೇ ಓದುಗರ ಅನುಕೂಲಕ್ಕಾಗಿ ಗ್ರಾಮ ಪಂಚಾಯಿತಿ ವತಿಯಿಂದ ಸಾವಿರಾರು ಪುಸ್ತಕಗಳನ್ನು ಒದಗಿಸಲಾಗಿದೆ. ಇಂತಹ ಸುಸಜ್ಜಿತ ಗ್ರಂಥಾಲಯವನ್ನು ಪ್ರತಿಯೊಂದು ಗ್ರಾಮ ಪಂಚಾಯಿತಿ ನಿರ್ಮಿಸಿ ಜನರಲ್ಲಿ ಓದುವಿನ ಅರಿವು ಮೂಡಿಸಿದರೆ ಅದರಿಂತ ಜನರಿಗೆ ಹಲವು ರೀತಿಯ ಮಾಹಿತಿಗಳನ್ನು ಪಡೆಯಲು ಸಾಧ್ಯವಾಗುವುದಲ್ಲದೆ, ಜ್ಞಾನದ ಭಂಡಾರವೂ ಹೆಚ್ಚಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.