ಬಾರ್ಬಡೋಸ್: 09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಗೆದ್ದು ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಬೇಕೆಂಬ ಇರಾದೆಯಲ್ಲಿದ್ದ ದಕ್ಷಿಣ ಆಫ್ರಿಕಾದ ಕನಸು ಭಗ್ನಗೊಂಡಿದ್ದು, ಟೀಮ್ ಇಂಡಿಯಾ ವಿರುದ್ಧ 7 ರನ್ಗಳ ಸೋಲುಂಡಿದೆ. ಗೆಲ್ಲಬಹುದಾಗಿತ್ತಾ ಪಂದ್ಯವನ್ನು ಸೋಲುಂಡ ಕುರಿತು ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕ್ರಮ್ ಮಾತನಾಡಿದ್ದು, ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ನಲ್ಲಿ ಈ ಕುರಿತು ಮಾತನಾಡಿದ ಮಾರ್ಕ್ರಮ್, ಸದ್ಯಕ್ಕೆ ನಮಗೆ ಧೈರ್ಯ ತುಂಬಿದೆ ಎಂದು ಹೇಳುತ್ತೇನೆ. ಸೋತಿರುವುದು ನಮಗೆ ನೋವುಂಟು ಮಾಡುತ್ತದೆ. ಆದರೆ, ನಮ್ಮ ಆಟಗಾರರು ಅಡಿದ ಬಗ್ಗೆ ನಮಗೆ ಹೆಮ್ಮೆ ಇದೆ. ನಾವು ಚೆನ್ನಾಗಿ ಬ್ಯಾಟ್ ಮಾಡಿದ್ದೆವು. ಆದರೆ, ಅವರು ಬೌಲಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು.
ಅಭಿಯಾನದಲ್ಲಿ ನಾವು ಬಹಳಷ್ಟು ಆಟವನ್ನು ನೋಡಿದ್ದು, ಟಿ20 ಕ್ರಿಕೆಟ್ನಲ್ಲಿ ಕೊನೆಯ ಎಸೆತ ಮುಗಿಯುವವರೆಗೂ ಪಂದ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ನಾವು ಆಡಿದ ರೀತಿ ನಮಗೆ ಖುಷಿ ನೀಡಿದ್ದು, ನಾವು ಫೈನಲ್ಗೆ ಅರ್ಹರಾಗಿದ್ದೆವು. ಪಂದ್ಯವನ್ನು ಗೆಲ್ಲಬಹುದಿತ್ತು. ಎದುರಾಳಿ ನೀಡಿದ್ದ ಟಾರ್ಗೆಟ್ಅನ್ನು (176) ಸುಲಭವಾಗಿ ಚೇಸ್ ಮಾಡಬಹುದು ಎಂದುಕೊಂಡೆವು. ಅಂತಿಮವಾಗಿ ಅವರು ಬೌಲ್ ಮಾಡಿ ಕಂಟ್ರೋಲ್ ಮಾಡಿದ ರೀತಿ ನಿಜಕ್ಕೂ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಕಮ್ಬ್ಯಾಕ್ ಮಾಡುತ್ತೇವೆ. ನಮ್ಮ ತಂಡದ ಪ್ರದರ್ಶನ ಹೆಮ್ಮೆ ಹಾಗೂ ಖುಷಿ ನೀಡಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಏಡೆನ್ ಮಾರ್ಕ್ರಮ್ ಹೇಳಿದ್ದಾರೆ.