ಆಂಧ್ರಪ್ರದೇಶ: ತಿರುಪತಿಯಲ್ಲಿ ಲಡ್ಡು ಪ್ರಸಾದಕ್ಕೆ ವಿಶೇಷ ಸ್ಥಾನವಿದೆ. ನಿತ್ಯ ಸಾವಿರಾರು ಲಡ್ಡು ಪ್ರಸಾದವನ್ನು ಭಕ್ತರು ಖರೀದಿಸಿ ಕೊಂಡೊಯ್ಯುತ್ತಾರೆ. ಸದ್ಯ ತಿರುಪತಿ ಲಡ್ಡುವಿನ ರುಚಿಯನ್ನು ಹೆಚ್ಚಿಸಲು ಟಿಟಿಡಿ ನಿರ್ಧರಿಸಿದೆ.
ಹೌದು… ತೆಲುಗು ದೇಶಂ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಆಂಧ್ರಪ್ರದೇಶದಲ್ಲಿ ಕೆಲ ಬದಲಾವಣೆಗಳು ನಡೆಯುತ್ತಿವೆ. ಕಳೆದ ವೈಸಿಪಿ ಆಡಳಿತದಲ್ಲಿ ರಾಜ್ಯದ ಎಲ್ಲಾ ವ್ಯವಸ್ಥೆಗಳು ನಾಶವಾಗಿವೆ ಎಂದು ಹೇಳುತ್ತಿರುವ ತೆಲುಗು ದೇಶಂ ಮೈತ್ರಿ ಸರ್ಕಾರ, ಅದೆಲ್ಲವನ್ನೂ ಸರಿಪಡಿಸುತ್ತೇವೆ ಎಂದು ಈಗಾಗಲೇ ಹಲವು ಬಾರಿ ಹೇಳಿದೆ.
ಈ ಹಿನ್ನೆಲೆಯಲ್ಲಿ ನಾರಾ ಚಂದ್ರಬಾಬು ನಾಯ್ಡು ಸರ್ಕಾರ ತಿರುಮಲ ತಿರುಪತಿ ದೇವಸ್ಥಾನದ ಮೇಲೆ ಹೆಚ್ಚು ಗಮನ ಹರಿಸಿದೆ. ತಿರುಮಲ ದರ್ಶನಕ್ಕೆ ಬರುವ ಭಕ್ತರಿಗೆ ಸಕಲ ಸೌಲಭ್ಯ ಕಲ್ಪಿಸುವುದಲ್ಲದೆ, ತಿರುಮಲದಲ್ಲಿ ಲಡ್ಡು ಹಾಗೂ ಉಚಿತ ಅಕ್ಕಿ ಪ್ರಸಾದದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ನಿರ್ಧರಿಸಿದೆ. ಭಕ್ತರಿಗೆ ಉತ್ತಮ ರುಚಿಯ ಪ್ರಸಾದ ನೀಡಲು ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇತ್ತೀಚೆಗೆ, ಟಿಟಿಡಿ ಇಒ ಜಯ್ ಶ್ಯಾಮಲಾ ರಾವ್ ಅವರು ತಿರುಪತಿಯ ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಭವನದಲ್ಲಿ ಅಧಿಕಾರಿಗಳು ಮತ್ತು ಡೈರಿ ತಜ್ಞರೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಶ್ರೀವಾರಿ ಲಡ್ಡು ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅಲ್ಲದೆ ಲಡ್ಡೂಗಳ ತಯಾರಿಕೆಯಲ್ಲಿ ಬಳಸುವ ತುಪ್ಪದ ಮೇಲೆ ಮುಖ್ಯ ಗಮನ ಹರಿಸಲಾಯಿತು. ಉತ್ತಮ ಗುಣಮಟ್ಟದ ತುಪ್ಪವನ್ನು ಹೇಗೆ ಖರೀದಿಸುವುದು ಮುಂತಾದ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.