ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ಇದೀಗ ಪವಿತ್ರಗೌಡರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರ್.ಆರ್. ನಗರ ಪೊಲೀಸರು ಇದೀಗ ಪವಿತ್ರಗೌಡರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಗೌಡಗೆ ಅಶ್ಲೀಲವಾಗಿ ಪದೇಪದೇ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದ್ದು, ಇದರಿಂದ ಸಿಟ್ಟಿಗೆದ್ದ ನಟ ದರ್ಶನ್ ಸೇರಿದಂತೆ ಇತರ ಗೆಳೆಯರು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆಸಿಕೊಂಡಿದ್ದರು. ನಟ ದರ್ಶನ್ ಸೇರಿ ಹಲವರು ಹತ್ಯೆ ಮಾಡಿದ್ದಾರೆ.
ಬಳಿಕ ಮೃತದೇಹವನ್ನು ಜೂನ್ 8 ಮೋರಿಯಲ್ಲಿ ಎಸೆಯಲಾಗಿತ್ತು. ಜೂನ್ 9 ರಂದು ಶವವನ್ನು ನಾಯಿಗಳು ಎಳೆದಾಡುತ್ತಿದ್ದಾಗ ಶವ ಪತ್ತೆಯಾಗಿದೆ. ನಟ ದರ್ಶನ್ ಸೇರಿ ಹಲವರು ರೇಣುಕಾಸ್ವಾಮಿ ಅವರ ಮರ್ಮಾಂಗಕ್ಕೆ ಹೊಡೆದು, ಒದ್ದು ಹಲ್ಲೆ ನಡೆಸಿದ್ದರು. ಕೊಲೆ ಮಾಡಿದ ಆರೋಪಿಗಳ ಜತೆ ದರ್ಶನ್ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಈಗ ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದಾರೆ.