ಮಾಲೆ: ಮಾಲ್ಡೀವ್ಸ್ನಲ್ಲಿ ಉಂಟಾಗಿರುವ ಹಣಕಾಸು ಬಿಕ್ಕಟ್ಟನ್ನು ಸರಿಪಡಿಸಿಕೊಳ್ಳಲು ಹಠ ಬಿಟ್ಟು ನೆರೆಯ ದೇಶಗಳೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಬೇಕು ಎಂದು ಮೊಹಮ್ಮದ್ ಮುಯಿಜುಗೆ ಮಾಜಿ ಅಧ್ಯಕ್ಷ ಇಬ್ರಾಹಿಮ್ ಮೊಹಮದ್ ಸೊಲಿಹ್ ಸಲಹೆ ನೀಡಿದ್ದಾರೆ.
ಇತ್ತೀಚೆಗಷ್ಟೆ ಭಾರತ ತಮ್ಮ ಸಾಲ ಮನ್ನಾ ಮಾಡಬೇಕು ಎಂದು ಅಧ್ಯಕ್ಷ ಮುಯಿಜು ಕೇಳಿಕೊಂಡಿದ್ದರು.
ʼನೆರೆಹೊರೆಯವರು ನಮಗೆ ಸಹಾಯ ಮಾಡುತ್ತಾರೆಂದು ನಾನು ನಂಬಿದ್ದೇನೆ. ಇದಕ್ಕಾಗಿ ನಾವು ಹಠ ಬಿಟ್ಟು ಮಾತುಕತೆಗೆ ಮುಂದಾಗಬೇಕು. ಆದರೆ ಮುಯಿಜು ಇದಕ್ಕೆ ತಯಾರಿಲ್ಲʼ ಎಂದ ಸೊಲಿಹ್, ನಮ್ಮ ಸರ್ಕಾರಕ್ಕೆ ಈಗ ಪರಿಸ್ಥಿತಿ ಅರ್ಥವಾಗಲು ಶುರುವಾಗಿದೆ ಎಂದರು.
ಭಾರತವನ್ನು ಮಾಲ್ಡೀವ್ಸ್ನಿಂದ ಹೊರಹಾಕುವ ಭರವಸೆಯೊಂದಿಗೆ ಚುನಾವಣೆ ಎದುರಿಸಿದ್ದ ಚೀನಾ ಪರ ನಾಯಕ ಮುಯಿಜು ಇತ್ತೀಚೆಗೆ ಭಾರತೀಯ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳುವಂತೆ ಭಾರತ ಸರ್ಕಾರಕ್ಕೆ ತಾಕೀತು ಮಾಡಿದ್ದರು.